ಕುಂದಾಪುರ, ಏ.12 (DaijiworldNews/MB) : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವಾರು ವರ್ಷಗಳಿಂದ ಸಾಗುತ್ತಿದ್ದರೂ ಇನ್ನೂ ಕೂಡಾ ಅಪೂರ್ಣವಾಗಿಯೇ ಉಳಿದಿದೆ. ಈ ತನಕ ನೀಡಿದ ಗಡುವುಗಳೆಲ್ಲವೂ ಸುಳ್ಳಾಗಿದ್ದು, ಮೇ 15ರೊಳಗೆ ಕಾಮಗಾರಿ ಮುಗಿಸದೇ ಇದ್ದರೆ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿ ಸಾರ್ವಜನಿಕ ಆಸ್ತಿಪಾಸ್ತಿ ಜನಜೀವನಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಅವರಿಗೆ ಕುಂದಾಪುರ ಮತ್ತು ಕೋಟ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮನವಿ ಸಲ್ಲಿಸಿದೆ.
ಗುತ್ತಿಗೆ ಕಂಪೆನಿಯ ಉದಾಸೀನತೆ, ಬೇಜವಾಬ್ದಾರಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಿರ್ಲಕ್ಷ್ಯ ಧೋರಣೆಯ ಕುರಿತು ಕಂಪೆನಿಯ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು, ಮುಂದಿನ 15 ದಿನಗಳ ಒಳಗೆ ಈ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕು. ಅದು ಸಾಧ್ಯವಿಲ್ಲವೆಂದಾದರೆ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೋರಾಟ ಸಮಿತಿ ತಿಳಿಸಿದೆ.
ಹಲವಾರು ವರ್ಷಗಳಿಂದ ಸುಳ್ಳು ಆಶ್ವಾಸನೆಗಳನ್ನು ನೀಡಿಕೊಂಡು ಬಂದಿರುವ ನವಯುಗ ಕಂಪೆನಿ ಇನ್ನೂ ತನ್ನ ಚಾಳಿಯನ್ನು ಬಿಟ್ಟಿಲ್ಲ. ಕುಂದಾಪುರ ಶಾಸ್ತ್ರೀ ಸರ್ಕಲ್ ಮೇಲ್ಸೇತುವೆ ಮತ್ತು ಬಸ್ರೂರು ಮೂರುಕೈ ಎಂಬ್ಯಾಕ್ಮೆಂಟನ್ನು ಮಾರ್ಚ್ 31 ರ ಒಳಗಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಭರವಸೆ ನೀಡಿದ ಸಂಸ್ಥೆ ಎಪ್ರಿಲ್ 10 ಕಳೆದರೂ ಬಿಟ್ಟುಕೊಟ್ಟಿಲ್ಲ. ಪ್ರಸ್ತುತ ಕಾಮಗಾರಿ ಕೂಡಾ ಅಲ್ಲಿ ನಡೆಯುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆಹಾಕಿದಾಗ ಅವರಿಗೆ ಸರಕುಗಳನ್ನು ಒದಗಿಸುತ್ತಿರುವ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಸಂದಾಯವಾಗಬೇಕಿದ್ದ ಸರಕಿನ ಮೊತ್ತವನ್ನು ಕ್ಲಪ್ತ ಸಮಯಕ್ಕೆ ಪಾವತಿ ಮಾಡದಿರುವ ಕಾರಣ ಸರಕನ್ನು ಸರಬರಾಜು ಮಾಡುತ್ತಿದ್ದವರು ಸ್ಥಗಿತಗೊಳಿಸಿದ್ದಾರೆ ಮತ್ತು ಅವರ ನೌಕರರಿಗೂ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ಕೆಲಸಗಾರರು ಇಲ್ಲದೆ ಕಾಮಗಾರಿ ನಿಂತು ಹೋಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಮಳೆಗಾಲದ ಮೊದಲು ಈ ರಸ್ತೆ ಕಾಮಗಾರಿಯು ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ತೀರಾ ಕಡಿಮೆ ಎಂಬ ಆತಂಕವನ್ನು ಮನವಿಯಲ್ಲಿ ವ್ಯಕ್ತ ಪಡಿಸಿದ್ದಾರೆ.
ಕೋಟ ಹೆದ್ದಾರಿ ಹೋರಾಟ ಸಮಿತಿ ಸರ್ವೀಸ್ ರಸ್ತೆ ನಿರ್ಮಾಣದ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ. ಕಿಶೋರ್ ಕುಮಾರ್, ರಾಜೇಶ ಕಾವೇರಿ, ಶಶಿಧರ ಹೆಮ್ಮಾಡಿ, ವಿಕಾಸ್ ಹೆಗ್ಡೆ, ಶ್ಯಾಮಸುಂದರ ನಾಯರಿ, ಕೆಂಚನೂರು ಸೋಮಶೇಖರ ಶೆಟ್ಟಿ, ವಿವೇಕ್, ಗಣೇಶ ಮೆಂಡನ್, ಪ್ರತಾಪ ಶೆಟ್ಟಿ, ಬೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.