ಉಡುಪಿ, ಏ 12 (DaijiworldNews/MS): ರಾಜ್ಯದ ಹಲವು ನಗರದಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ವೇಗವಾಗಿ ಹರಡುತ್ತಿದೆ . ಇದು ಮುಂದುವರಿದರೆ ಸೋಂಕನ್ನು ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಹೆಚ್ಚು ಕಷ್ಟವಾಗುತ್ತದೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಹೇಳಿದ್ದಾರೆ.
ಏ.12ರ ಸೋಮವಾರ ಸಾರ್ವಜನಿಕರಿಗೆ ನೀಡಿದ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಅವರು " ನಮ್ಮ ಜಿಲ್ಲೆಯಲ್ಲಿ ಇಂದಿಗೂ ಕೊರೊನಾ ಪರಿಸ್ಥಿತಿ ನಿಯಂತ್ರಣದಲಿಲ್ಲ. ದಯವಿಟ್ಟು ಕೊರೊನಾ ಸೋಂಕನ್ನು ನಿರ್ಲಕ್ಷಿಸದಂತೆ ಸಾರ್ವಜನಿಕರಿಗೆ ಕೈ ಮುಗಿದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಯಾವುದೇ ಸಾರ್ವಜನಿಕ ಸಮಾರಂಭಗಳು ಮತ್ತು ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಹಾಜರಾಗಬೇಡಿ. ಎಲ್ಲೆಡೆಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಹಾಕಿಕೊಳ್ಳಿ , ಕೊವೀಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ
ಒಂದಷ್ಟು ದಿನಗಳವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಡಿ. ನಿಮ್ಮ ಮನೆಗಳಲ್ಲಿ ಹಿರಿಯರಿದ್ದರೆ ತಪ್ಪದೆ ಲಸಿಕೆ ಹಾಕಿಸಿ. ಲಸಿಕೆಯೂ ಕೊವಿಡ್ ವೈರಸ್ನ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಕಳೆದ ಬಾರಿಯ ಕೋವಿಡ್ ಅಲೆಗೆ ನಮ್ಮ 192 ಹಿರಿಯ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಮಾತ್ರವಲ್ಲದೆ ಐಸಿಯು ವಿನಲ್ಲಿ ಹಾಸಿಗೆ ಕೊರತೆ, ವೆಂಟಿಲೇಟರ್ ಕೊರತೆಯನ್ನು ಎದುರಿಸಿದ್ದೇವೆ. ಇದೀಗ ಮತ್ತೆ ನಾವು ನಿರ್ಲಕ್ಷಿಸಿದರೆ ಅದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತದೆ. ದಯವಿಟ್ಟು ನಿಮ್ಮ ಮನೆಗಳಲ್ಲಿ ಹಿರಿಯ ನಾಗರಿಕರನ್ನು ಸುರಕ್ಷಿತರಾಗಿರುವಂತೆ ನೋಡಿಕೊಳ್ಳಿ "ಎಂದು ವಿನಂತಿಸಿಕೊಂಡರು.