ಮಂಗಳೂರು,ಏ 12 (DaijiworldNews/MS): ಏ.11ರ ಭಾನುವಾರ 8.45ರ ವೇಳೆಗೆ ಅಕಾಲಿಕವಾಗಿ ಸುರಿದ ಜಟಿಲ ಮಳೆ, ಗುಡುಗು ಮಿಂಚು ಮತ್ತು ಗಾಳಿಗೆ ಹರೇಕಳ ಭಾಗದಲ್ಲಿ ಹಲವೆಡೆ ಹಾನಿಯಾಗಿದೆ.
ಗಾಳಿಯ ರಭಸಕ್ಕೆ ನಾಲ್ಕು-ಐದು ಭಾಗದಲ್ಲಿ ಬೃಹತ್ ಮರಗಳು ನೆಲಕ್ಕೆ ಉರುಳಿದ್ದು, ಅದೇ ರೀತಿ 5 ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.ಅದೇ ರೀತಿ ಉಲ್ಲಾಸ್ ನಗರ ವ್ಯಾಪ್ತಿಯಲ್ಲಿ ಒಂದೆರಡು ಮನೆಗಳಿಗೆ ಸಣ್ಣ ಪುಟ್ಟ ಹಾನಿಯಾಗಿದ್ದು, ಒಂದು ಮನೆಗೆ ಭಾಗಷ ಹಾನಿಯನ್ನು ಉಂಟುಮಾಡಿದೆ.
ಕೆಲ ಹೊತ್ತು ವಾಹನ ಸಂಚಾರಕ್ಕೆ ಎಲಿಯಾರ್ ಪದವು - ಐಕು - ನ್ಯೂಪಡ್ಪು ಮಾರ್ಗದಲ್ಲಿ ತಡೆ ಉಂಟಾಗಿತ್ತು. ಬಳಿಕ ಸಾರ್ವಜನಿಕರಿಂದ ತ್ವರಿತ ಶ್ರಮದಾನ ಕಾರ್ಯನಡೆದಿದ್ದು, ಸ್ಥಳದಲ್ಲಿ ಮೆಸ್ಕಾಂ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಮೊಕ್ಕಾಂ ಹೂಡಿ ಸಾರ್ವಜನಿಕರು ಸಹಕರಿಸಿ ಸುಗಮ ರಸ್ತೆ ಸಂಚಾರಕ್ಕೆ ಶ್ರಮಿಸಿದರು.