ಮಂಗಳೂರು, ಏ.12 (DaijiworldNews/MB) : ಸರ್ಕಾರ ಸೂಚನೆಯಂತೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು ಶನಿವಾರ ರಾತ್ರಿ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 64 ದ್ವಿಚಕ್ರ ಮತ್ತು 4 ಚತುಷ್ಚಕ್ರ ವಾಹನಗಳ ಮೇಲೆ ಪ್ರಕರಣಗಳು ದಾಖಲಾಗಿವೆ.
ಹಲವು ರಸ್ತೆಗಳಲ್ಲಿ ಚೆಕ್ಪೋಸ್ಟ್ಗಳನ್ನು ರಚಿಸಿರುವ ಪೊಲೀಸರು ಆ ರಸ್ತೆಯಲ್ಲಿ ಯಾವುದೇ ಬಲವಾದ ಕಾರಣವಿಲ್ಲದೆ ವಾಹನದಲ್ಲಿ ಸಂಚರಿಸುತ್ತಿದ್ದವರ ವಿರುದ್ದ ಪ್ರಕರಣ ದಾಖಲಿಸಿದರು. ರಾತ್ರಿ 10 ಗಂಟೆಗೆ ನಗರ ಪೊಲೀಸ್ ಆಯುಕ್ತ ಎಸ್.ಶಶಿ ಕುಮಾರ್, ಡಿಸಿಪಿಗಳಾದ ವಿನಯ್ ಎ ಗೌಂಕರ್ ಹಾಗೂ ಹರಿರಾಮ್ ಶಂಕರ್ ಅವರು ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಇನ್ನು ಈ ನೈಟ್ ಕರ್ಫ್ಯೂ ವೇಳೆ ಮಾಜಿ ಸಚಿವ ಬಿ.ರಮನಾಥ್ ರೈ ಅವರು ಕಾರಿನಿಂದ ಇಳಿದು ಪೊಲೀಸರೊಂದಿಗೆ ಮಾತನಾಡಿ, ಪಡೀಲ್ ಜಂಕ್ಷನ್ನಲ್ಲಿ ಬ್ಯಾರಿಕೇಡ್ಗಳು ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿದುಬಂದ ನಂತರ ಬ್ಯಾರಿಕೇಡ್ಗಳನ್ನು ಕೊಂಚ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಪೊಲೀಸರು ಪಬ್ಗಳು, ಬಾರ್ಗಳು ಮತ್ತು ರೆಸ್ಟೋರೆಂಟ್ಗಳ ಬಗ್ಗೆ ನಿಗಾ ಇಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ, ಕರ್ಫ್ಯೂ ಉಲ್ಲಂಘನೆಯ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ ತಿಳಿಸಿದ್ದಾರೆ. ಕರ್ಫ್ಯೂ ಬಗ್ಗೆ ತಿಳಿಯದೆ ರಾತ್ರಿ 10 ಗಂಟೆಯ ನಂತರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಲವು ವಾಹನಗಳಿಗೆ ಕೊರೊನಾ ನೈಟ್ ಕರ್ಫ್ಯೂ ಬಗ್ಗೆ ತಿಳಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಶನಿವಾರ ರಾತ್ರಿ ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಿರುವ ಪೊಲೀಸ್ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿದರು. ಅವರು ರಾತ್ರಿ 10 ಗಂಟೆಯ ನಂತರ ಚಲಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ನೀಡಿರುವ ಸೂಚನೆಗಳನ್ನು ಅನುಸರಿಸಲು ತಿಳಿಸಿದರು.