ಕಾಸರಗೋಡು,ಏ 12 (DaijiworldNews/MS): ಬಿಎಸ್ಎನ್ಎಲ್ ಕಚೇರಿಯಲ್ಲಿ ರಾತ್ರಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಸರಗೋಡಿನ ಯುವಕ ಈಗ ರಾಂಚಿಯ ಐಐಎಂ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿದ್ದಾರೆ.
ಐಐಎಂ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿರುವ ರಂಜಿತ್ ರಾಮಚಂದ್ರನ್ ಅವರು ತಾವು ಪದವಿಗೇರಲು ಪಟ್ಟ ಕಷ್ಟವನ್ನು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಹಾಕಿದ ಪೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ಗೆ ಈವರೆ ಲೈಕ್ ೩೭೦೦೦ ಅಧಿಕ ಲೈಕ್ ಗಳು ಬಂದಿವೆ.
ಸದ್ಯ ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರವೇ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಪದವಿವರೆಗೂ ಮಾತೃಭಾಷೆ ಮಲಯಾಳಂನಲ್ಲಿ ಓದಿದ ರಂಜಿತ್ ರಾಮಚಂದ್ರನ್ ಉನ್ನತ ಶಿಕ್ಷಣ, ಪಿ.ಹೆಚ್.ಡಿ. ಪಡೆಯಲು ಭಾಷೆ ಅಡ್ಡಿಯಾಗಿಲ್ಲ. ರಾತ್ರಿ ಬಿಎಸ್ಎನ್ಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಾ ಹಗಲು ಕಾಲೇಜಿಗೆ ಹೋಗಿ ಓದುತ್ತಿದ್ದ ಅವರು ತಮ್ಮ ಕಷ್ಟದ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಸ್ಟ್ ವೈರಲ್ ಆಗಿದೆ.
ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ. ಅವರ ತಂದೆ ಟೈಲರ್ ಆಗಿದ್ದು, ತಾಯಿ ಉದ್ಯೋಗಖಾತ್ರಿ ಯೋಜನೆಯಡಿ ದೈನಂದಿನ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಮೂವರು ಮಕ್ಕಳಲ್ಲಿ ರಂಜಿತ್ ಹಿರಿಯವರು. ಮಳೆಗಾಲದಲ್ಲಿ ಸೋರುವ ಶಿಥಿಲಗೊಂಡ ಮನೆಯಲ್ಲಿ ಇವರ ಜೀವನ ನಡೆಯುತ್ತದೆ.