ಮಂಗಳೂರು, ಏ. 11 (DaijiworldNews/SM): ನಾಲ್ಕು ದಿನಗಳ ಹಿಂದೆ ಉಳ್ಳಾಲ ಸೋಮೇಶ್ವರ ಉಚ್ಚಿಲ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಮೀನುಗಾರರೊಬ್ಬರ ಮೃತದೇಹ ಇಂದು ಮುಂಜಾನೆ ಮಂಜೇಶ್ವರದ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ತಣ್ಣೀರುಬಾವಿಯ ದಾವೂದ್ ಸಿದ್ದೀಕ್(39) ಮೃತಪಟ್ಟವರು.
ಇವರು ಗುರುವಾರ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದರು. ಅಂದು ಪೂರ್ವಾಹ್ನ ಸುಮಾರು 11:30ರ ವೇಳೆಗೆ ನಾಪತ್ತೆಯಾಗಿದ್ದರು. ದಾವೂದ್ ಸಿದ್ದೀಕ್ ಅವರ ಮೃತದೇಹವು ಇಂದು ಬೆಳಗ್ಗೆ ತಲಪಾಡಿ-ಮಂಜೇಶ್ವರ ಮಧ್ಯೆ ಕಡಲ ತೀರದಿಂದ 14 ನಾಟಿಕಲ್ ಮೈಲ್ ದೂರದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯ ದೋಣಿಯವರು ಹಿಡಿದು ದಡಕ್ಕೆ ತಂದಿದ್ದಾರೆ.ದಾವೂದ್ ಸಿದ್ದೀಕ್ ಕಳೆದ 15 ವರ್ಷಗಳಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತಣ್ಣೀರುಬಾವಿಯ ಮುಳುಗು ತಜ್ಞರ ತಂಡದ ಸದಸ್ಯರೂ ಆಗಿದ್ದರು.
2016 ರಲ್ಲಿ ದುನಿಯಾ ವಿಜಯ್ ಮಾಸ್ತಿಗುಡಿ ಶೂಟಿಂಗ್ ವೇಳೆ ದುರಂತ ಸಂಭವಿಸಿ ಅನಿಲ್, ಉದಯ್ ಮೃತಪಟ್ಟಾಗ ಅವರ ಮೃತದೇಹ ಪತ್ತೆ ಮಾಡಲು ಇದೇ ದಾವೂದ್ ಸಿದ್ದೀಕ್ ನೆರವಾಗಿದ್ದರು.
ಯಾವುದೇ ಭಾಗದಲ್ಲಿ ನೀರಿಗೆ ಬಿದ್ದಾಗ ಜಿಲ್ಲಾಡಳಿತ ತಣ್ಣೀರು ಬಾವಿ ಮುಳುಗು ತಜ್ಞರ ನೆರವು ಕೇಳಿಯೇ ಕೇಳುತ್ತದೆ. ಆ ತಂಡದಲ್ಲಿ ದಾವೂದ್ ಸಿದ್ದೀಕ್ ಕೂಡ ಇರುತ್ತಿದ್ದರು. ಆದರೆ ಅನಿರೀಕ್ಷಿತವಾಗಿ ದಾವೂದ್ ಸಿದ್ದೀಕ್ ನೀರಿಗೆ ಬಿದ್ದಾಗ ಆತನ ಪತ್ತೆಗೆ ಜಿಲ್ಲಾಡಳಿತ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಕುಟುಂಬ, ಸ್ನೇಹಿತ ವರ್ಗ ಅಸಮಾಧಾನ ವ್ಯಕ್ತಪಡಿಸಿದೆ.