ಕುಂದಾಪುರ, ಏ. 11 (DaijiworldNews/SM): ತಲಸ್ಸಿಮಿಯಾ ಕಾಯಿಲೆಯಿಂದ ಬಳಲುತ್ತಿರುವ ಪುಟಾಣಿ ಬಾಲಕ ರಿಷಿಕ್ ಆಚಾರ್ಯ ಪಡುಕೋಣೆ ಅವರ ಚಿಕಿತ್ಸೆ ವೆಚ್ಚದ ಸಲುವಾಗಿ ಹೊಯ್ಸಳ ಟ್ರಸ್ಟ್ ನಾಡ ನೇತೃತ್ವದಲ್ಲಿ ಶನಿವಾರ ಕುಂದಾಪುರ ವಾರದ ಸಂತೆ ಹಾಗೂ ಕುಂದಾಪುರ ಪೇಟೆಯಲ್ಲಿ ಯಕ್ಷಗಾನ ವೇಷ ಧರಿಸಿ ಧನ ಸಂಗ್ರಹಿಸಲಾಯಿತು.
ಹವ್ಯಾಸಿ ಯಕ್ಷಗಾನ ಕಲಾವಿದ ಬೆಂಕಿ ಮಣಿ ಸಂತು ಅರೆಹೊಳೆ ಅವರು ಮಹಿಷಾಸುರ ವೇಷಧರಿಸಿ ಕುಂದಾಪುರದ ವಾರದ ಸಂತೆ ಹಾಗೂ ಕುಂದಾಪುರ ಪೇಟೆಯಲ್ಲಿ ಎಲ್ಲಾ ಅಂಗಡಿಗಳಿಗೆ ತೆರಳಿ ಧನ ಸಂಗ್ರಹಿಸಿದರು. ಇವರಿಗೆ ನಂದೀಶ್ ಜನ್ನಾಡಿ ಸಹಕರಿಸಿದರು. ಹೊಯ್ಸಳ ಟ್ರಸ್ಟ್ ನಾಡ ಪಡುಕೋಣೆಯ ಸದಸ್ಯರು ಈ ಧನ ಸಂಗ್ರಹದಲ್ಲಿ ಭಾಗಿಯಾಗಿದ್ದರು.
ಬಾಲಕನಿಗೆ ತಲಸ್ಸಿಮಿಯಾ : ಚಿಕಿತ್ಸೆಗೆ ಬೇಕಿದೆ ರೂ.40 ಲಕ್ಷ
ಬೈಂದೂರು ತಾಲೂಕಿನ ಪಡುವರಿ ಗ್ರಾಮದ ನಿವಾಸಿ ಸುಮಂಗಲ ಆಚಾರ್ಯ ಮತ್ತು ರಾಜೇಂದ್ರ ಆಚಾರ್ಯರ 6 ವರ್ಷದ ಮಗನಾದ ರಿಷಿಕ್ ಕಳೆದ ಆರು ವರ್ಷಗಳಿಂದ ತಲಸ್ಸಿಮಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾನೆ. ರಿಷಿಕ್ ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೋಟೆಗುಡ್ಡೆ)ಯಲ್ಲಿ ಓದುತ್ತಿದ್ದು, ಈಗಾಗಲೇ ಬಾಲಕನ ಚಿಕಿತ್ಸೆಗಾಗಿ ಪೋಷಕರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದಾರೆ.
ಈಗಾಗಲೇ ಲಕ್ಷಾಂತರ ರೂಪಾಯಿ ಚಿಕಿತ್ಸೆಗೆ ವೆಚ್ಚ ಮಾಡಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುವ ಬಡ ಕುಟುಂಬ ಈಗಾಗಲೇ ಸಾಧ್ಯ ಇರುವಲ್ಲೆಲ್ಲ ಸಾಲ ಮಾಡಿ ಮಗುವಿನ ಚಿಕಿತ್ಸೆಗೆ ಹಣ ವಿನಿಯೋಗಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಪಾಸಣೆ ನಡೆಸಿದ ವೈದ್ಯರು ಅಸ್ಥಿಮಜ್ಜೆ ಚಿಕಿತ್ಸೆ ಮಾಡಬೇಕೆಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾರೆ. ಈ ಚಿಕಿತ್ಸೆಗೆ ಸುಮಾರು ರೂ. 35ರಿಂದ 40 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ವೈದ್ಯಕೀಯ ದೃಢೀಕರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.