ಉಡುಪಿ, ಏ.11 (DaijiworldNews/MB) : ಪರ್ಕಳ 169 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಬಂಧಿಸಿ ಪರ್ಕಳ ಪೇಟೆಯಲ್ಲಿ ಕಟ್ಟಡ ತೆರವು ಕಾರ್ಯಕ್ಕೆ ಸ್ಥಳಿಯರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣದಿಂದ ತೆರವು ಕಾರ್ಯ ಸ್ಥಗಿತಗೊಂಡಿತು. ಸ್ಥಳೀಯ ಅಂಗಡಿ ಮಾಲೀಕರಿಗೆ ನೋಟಿಸ್ ಕೊಡದೆ. ಹೆದ್ದಾರಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವು ಕಾರ್ಯ ಆರಂಭಿಸಿದ್ದಾರೆ ಎಂದು ಸ್ಥಳೀಯರು ತಗಾದೆ ತೆಗೆದರು. ನೂರಾರು ಮಂದಿ ಸ್ಥಳೀಯರು ಜಮಾಯಿಸಿ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡರು.
ಸ್ಥಳಕ್ಕೆ ಮಣಿಪಾಲ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಆಗಮಿಸಿ ಸ್ಥಳೀಯರ ಮನವೊಲಿಸಿದರೂ ಸ್ಥಳಿಯರು ಹೆದ್ದಾರಿ ಇಲಾಖರ ಹಿರಿಯ ಇಂಜಿನಿಯರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಅಮೃತ್ ಶೆಣೈ ಮಾತನಾಡಿ, ಅಂಗಡಿ ಮಾಲೀಕರಿಗೆ ನೋಟಿಸ್ ನೀಡದೆ, ಏನು ಸ್ಪಷ್ಟನೆ ನೀಡದೆ ಕಟ್ಟಡ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸದೇ ತೆರವಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಅಲ್ಲದೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು. ''ಆದೇಶ ಪತ್ರ ಇಲ್ಲದೆ ಕಟ್ಟಡ ತೆರವಿಗೆ ಮುಂದಾದ ಅಧಿಕಾರಿಯನ್ನು ಬಂಧಿಸಬೇಕು'' ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಹಿರಿಯ ಇಂಜಿನಿರ್ ನಾಗರಾಜ್ ನಾಯ್ಕ್ ಸಂತ್ರಸ್ತರಿಗೆ ಸ್ಪಷ್ಟನೆ ನೀಡಿದರು. ''ತ್ರೀಡಿ ನೋಟಿಫಿಕೆಶನ್ ಬಳಿಕ ಜಾಗ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ಬಂದಂತೆ. ಇದು ಅಂತಿಮ ನೋಟಿಸ್ ಇದ್ದ ಹಾಗೇ. ಈಗಾಗಲೆ ಹಲವು ಭಾರಿ ಸಭೆ ಕರೆದು ಸೂಚನೆ ನೀಡಲಾಗಿದೆ'' ಎಂದರು.
ಕೆಲಕಾಲ ಸಂತ್ರಸ್ತರು ಮತ್ತು ಇಂಜಿನಿಯರ್ ನಡುವೆ ಚರ್ಚೆ ನಡೆಯಿತು. ''ಸದ್ಯ ಕಟ್ಟಡ ತೆರವು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ಇಂದು ಶುರು ಮಾಡಿದ ಕಟ್ಟಡ ಒಂದೆರಡು ದಿನಗಳಲ್ಲಿ ತೆರವು ಮಾಡುತ್ತೇವೆ. ಬೇರೆ ಸಂತ್ರಸ್ತರ ಅಂಗಡಿ ಮುಂಗಟ್ಟು ತೆರವಿಗೆ ಒಂದುವಾರ ಕಾಲಾವಕಾಶ ಕೊಡುತ್ತೇವೆ. ಈಗಾಗಲೇ ಖಾಲಿ ಇರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭ ಮಾಡುತ್ತೇವೆ'' ಎಂದು ಇಂಜಿನಿಯರ್ ತಿಳಿಸಿದರು.