ಮಂಗಳೂರು, ಏ.11 (DaijiworldNews/MB) : ಕೊರೊನಾ ಸೋಂಕಿನ ನಿಯಂತ್ರಣದ ಹಿನ್ನೆಲೆ ರಾಜ್ಯ ಸರ್ಕಾರದ ಆದೇಶದಂತೆ ಇಲ್ಲಿನ ಪೊಲೀಸ್ ಕಮಿಷನರೇಟ್ನ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು ಪೊಲೀಸರು ಏಪ್ರಿಲ್ 10 ರ ಶನಿವಾರ ರಾತ್ರಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರು.
ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ವಾಹನಗಳನ್ನು ಪರಿಶೀಲಿಸಿದ್ದು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ಉತ್ಸಾಹದಿಂದ ಕರ್ಫ್ಯೂ ಜಾರಿಗೆ ಎಲ್ಲಾ ಕ್ರಮಗಳನ್ನು ಕೈಗೊಂಡರು. ಜನರು ಮತ್ತು ವಾಹನಗಳ ಅನಗತ್ಯ ಸಂಚಾರವನ್ನು ಪೊಲೀಸರು ತಡೆದರು. ಹಾಗೆಯೇ ರಾತ್ರಿ ಕರ್ಫ್ಯೂ ಉಲ್ಲಂಘಿಸಿದವರನ್ನು ಬಂಧಿಸಿ ಎಚ್ಚರಿಕೆ ನೀಡಲಾಯಿತು.
ಕರ್ಫ್ಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದರಿಂದ, ಅನೇಕ ಅಂಗಡಿ ವ್ಯಾಪಾರಿಗಳು ಹಾಗೂ ಕಾರ್ಮಿಕರು ತಮ್ಮ ಚಟುವಟಿಕೆಯನ್ನು ಎಂದಿಗಿಂತ ಮೊದಲೇ ಸ್ಥಗಿತಗೊಳಿಸಿದರು. ವ್ಯಾಪಾರಿಗಳು ಅಂಗಡಿಗಳು ಬೇಗನೇ ಮುಚ್ಚಿ ಮನೆಗೆ ವಾಪಾಸ್ ಆದರು.
ಇನ್ನು ನೈಟ್ ಕರ್ಪ್ಯೂ ಜಾರಿ ಹಿನ್ನೆಲೆ ಮಂಗಳೂರಿನ ಪದುವಾ ಶಾಲೆ ಆವರಣದಲ್ಲಿ ಶನಿವಾರ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪೊಲೀಸ್ ಪರೇಡ್ ನಡೆಸಿದ್ದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಈ ಪರೇಡ್ನಲ್ಲಿ ಹಾಜರಾಗಿದ್ದರು.
ಇನ್ನು ರಾತ್ರಿಪಾಳಿಯ ನೌಕರರಿಗೆ ಕೆಲವು ಷರತ್ತುಗಳ ಮೇಲೆ ಕೆಲಸಕ್ಕೆ ಹೋಗಿ ಬರಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು ''ರಾತ್ರಿಪಾಳಿಯ ಕೆಲಸಗಾರರನ್ನು ಕರೆದೊಯ್ಯುವ ಸಂಸ್ಥೆಯ ವಾಹನಗಳಲ್ಲಿ ಆ ಸಂಬಂಧ ಆಯಾ ಕಂಪನಿಗಳಿಂದ ಅಧಿಕೃತ ಪತ್ರ ಇರಬೇಕು. ರಾತ್ರಿ ಪಾಳಿಯ ಕೆಲಸದ ಮೇಲೆ ಓಡಾಡುವ ನೌಕರರು ತಮ್ಮ ಕಂಪನಿಗಳಿಂದ ನೀಡಲಾಗಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಜತೆಗೆ ಸಂಚಾರ ವೇಳೆ ಎಲ್ಲಾ ಕೊರೊನಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು'' ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.