ಛಾಯಾಚಿತ್ರ - ದಯಾನಂದ ಕುಕ್ಕಾಜೆ
ಮಂಗಳೂರು, ಏ.10 (DaijiworldNews/MB) : ಮಂಗಳೂರಿನಲ್ಲಿ ಇಂದು ರಾತ್ರಿಯಿಂದ ನೈಟ್ ಕರ್ಪ್ಯೂ ಜಾರಿ ಹಿನ್ನೆಲೆ ಮಂಗಳೂರಿನ ಪದುವಾ ಶಾಲೆ ಆವರಣದಲ್ಲಿ ಶನಿವಾರ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪೊಲೀಸ್ ಪರೇಡ್ ನಡೆಸಿದರು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಈ ಪರೇಡ್ನಲ್ಲಿ ಹಾಜರಾಗಿದ್ದರು.
ನೈಟ್ ಕರ್ಫ್ಯೂ ಸಂದರ್ಭ ಪಾಲಿಕೆ ವ್ಯಾಪ್ತಿಯ 45 ಚೆಕ್ ಪೋಸ್ಟ್ಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಸುಮಾರು 480 ಪೊಲೀಸರು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
8 ಇನ್ಸ್ಪೆಕ್ಟರ್, 40 ಸಬ್ಇನ್ಸ್ಪೆಕ್ಟರ್, 04 ಎಸಿಪಿಗಳು, 02 ಡಿಸಿಪಿಗಳು ಈ ಸಂದರ್ಭ ಕರ್ತವ್ಯದಲ್ಲಿ ಇರುತ್ತಾರೆ. ಪ್ರತೀ ಚೆಕ್ ಪೋಸ್ಟ್ನಲ್ಲಿ ಇನ್ಸ್ಪೆಕ್ಟರ್ ಸೇರಿ 11 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಪೊಲೀಸರನ್ನುದ್ದೇಶಿಸಿ ಮಾತನಾಡಿದ ಆಯುಕ್ತರು, "ನಾವು ಈಗಾಗಲೇ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದೇವೆ. ರಾತ್ರಿ ಕರ್ಫ್ಯೂ ಬಗ್ಗೆ ಜನರಿಗೆ ಇದ್ದ ಅನುಮಾನಗಳನ್ನು ಸಹ ನಾವು ಪರಿಹರಿಸಿದ್ದೇವೆ. ವೈದ್ಯಕೀಯ ತುರ್ತು ಸೇವೆಗಳು, ಅಗತ್ಯ ವಸ್ತುಗಳ ಸಾಗಣೆ, ನೌಕರರ ರಾತ್ರಿ ಪಾಳಿಗಳು, ಮಾನ್ಯ ಟಿಕೆಟ್ಗಳನ್ನು ಹೊಂದಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಪ್ರಯಾಣಿಸುವ ಜನರಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಈ ಐದು ವಿಭಾಗಗಳ ಹೊರತಾಗಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಎಲ್ಲಾ ಪೊಲೀಸ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಕೊರೊನಾ ಸೋಂಕಿಗೆ ಒಳಗಾಗುವುದನ್ನು ತಡೆಯಲು ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಬೇಕು ಎಂದು ಅಧಿಕಾರಿಗಳಲ್ಲಿ ನನ್ನ ಮನವಿ. ಪೊಲೀಸ್ ಸಿಬ್ಬಂದಿಗಳ ಆರೋಗ್ಯ ನಮಗೆ ಬಹಳ ಮುಖ್ಯ" ಎಂದು ಹೇಳಿದರು.