ಕುಂದಾಪುರ, ಏ.10 (DaijiworldNews/MB) : ಸಮಾಜದ ಎಲ್ಲಾ ವರ್ಗದ ಬಂಧುಗಳ ಮೇಲೂ ನಿರ್ಬಂಧ ಹೇರಲಾಗುತ್ತಿದೆ. ಮೀನುಗಾರ ಬಂಧುಗಳು ಕೊರೊನಾ ಕಾರಣಗಳಿಂದಾಗಿ ಕಳೆದ ಒಂದು ವರ್ಷಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಅವರಿಗೆ ಯಾವುದೆ ರೀತಿಯ ನಿರೀಕ್ಷಿತ ನೆರವು ಸಿಗಲಿಲ್ಲ ಎನ್ನುವು ನೋವು ಇದ್ದು, ಈ ಭಾಗದ ಪ್ರಭಾವಿ ಜನಪ್ರತಿನಿಧಿಗಳು ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಉಡುಪಿ ಜಿಲ್ಲೆಯಿಂದ ಕಾರಾವರ ಜಿಲ್ಲೆಯ ಭಟ್ಕಳ ತನಕ ಮೀನುಗಾರರ ಚಟುವಟಿಕೆಗಳನ್ನು ವೀಕ್ಷಿಸಲು ಮೀನುಗಾರರೊಂದಿಗೆ ಬೋಟ್ನಲ್ಲಿ ತೆರಳಿ ದಾರಿಯ ಮಧ್ಯದಲ್ಲಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದ ಅವರು ಗಂಗೊಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಾಹಸಮಯವಾದ ಜೀವನ ನಡೆಸುತ್ತಿರುವ ಲಕ್ಷಾಂತರ ಮಂದಿ ಮೀನುಗಾರರ ಕುಟುಂಬ ಕಷ್ಟದ ಜೀವನ ನಡೆಸುತ್ತಿದ್ದಾರೆ. ತೈಲ ಬೆಲೆಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ಸಂಕಷ್ಟ ಒಂದೆಡೆಯಾದರೆ, ಮೀನುಗಾರಿಕೆಯಲ್ಲಿಯೂ ಕೂಡ ಈಚೀನ ದಿನಗಳಲ್ಲಿ ಸಣ್ಣ ಪುಟ್ಟ ಮೀನುಗಳನ್ನು ಹೊರತು ಪಡಿಸಿ, ದೊಡ್ಡ ಆದಾಯ ತರುವ ಯಾವುದೆ ಮೀನುಗಳು ದೊರಕುತ್ತಿಲ್ಲ ಎನ್ನುವುದನ್ನು ಕರಾವಳಿಯ ಮೀನುಗಾರ ಬಂಧುಗಳು ಹೇಳುತ್ತಿದ್ದಾರೆ. ರೈತರ, ಯುವಕರ, ಮೀನುಗಾರರ, ಜನ ಸಾಮಾನ್ಯರ ಮಾತಗಳನ್ನು ಕೇಳದ ಸರ್ಕಾರದ ದರ್ಬಾರ್ಗಳನ್ನು ತಡೆಯೋಕ್ಕೆ ಯಾರಿಂದ ಸಾಧ್ಯವಾಗುತ್ತದೆ ಎಂದ ಅವರು ಇದಕ್ಕೆ ಕಾಲವೇ ಉತ್ತರ ನೀಡಬೇಕು ಎಂದ ಅವರು ಮುಂಬರುವ ದಿನಗಳಲ್ಲಿ ಮೀನುಗಾರರ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಅವಕಾಶ ದೊರೆಕಿದಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.
ರಾತ್ರಿ ಹೊತ್ತೊ ಕೇವಲ ಶೇ.1 ರಷ್ಟು ಜನ ಮಾತ್ರ ಓಡಾಡುತ್ತಿದ್ದು, ಉಳಿದ ಶೇ.99 ರಷ್ಟು ಮಂದಿ ದಿನಪೂರ್ತಿ ಚಟುವಟಿಕೆ ನಡೆಸುತ್ತಾರೆ. ಅವರ ಮೇಲೆ ನಿರ್ಬಂಧ ಹೇರಬೇಕೇ ಹೊರತು ರಾತ್ರಿ ನಿರ್ಬಂಧ ಹೇರುತ್ತಿರುವುದು ಅವೈಜ್ಞಾನಿಕ ಕ್ರಮ. ರಾತ್ರಿ ಕರ್ಪ್ಯೂ ಎನ್ನೋದೆ ಒಂದು ಹಾಸ್ಯಾಸ್ಪದ ಪದ. ದಿನವೆಲ್ಲ ಚಟುವಟಿಕೆಗೆ ಅವಕಾಶ ನೀಡಿ ರಾತ್ರಿ ಮಾತ್ರ ನಿರ್ಬಂಧ ಮಾಡೋದರಿಂದ ಕೊರೊನಾ ಹೇಗೆ ತಡೆಗಟ್ಟುತ್ತಾರೋ ಗೊತ್ತಿಲ್ಲ. ದೈನಂದಿನ ಚಟುವಟಿಕೆಗಳಿಗೆ ತೊಡಕಾಗದಂತೆ ಕನಿಷ್ಠ 4 ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ, ಜನ ಸೇರುವ ಕಾರ್ಯಕ್ರಮ ಮಾಡುವಂತಿಲ್ಲ ಎನ್ನುವುದನ್ನು ಕಡ್ಡಾಯಗೊಳಿಸಿ ವಾಣಿಜ್ಯ ಹಾಗೂ ಇತರ ಚಟುವಟಿಕೆಗಳಲ್ಲಿ ತಜ್ಞರ ಸಲಹೆಗಳನ್ನು ಪಾಲಿಸಲು ಒತ್ತು ನೀಡಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬಹುದಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮತ ಯಂತ್ರಗಳನ್ನು ಬಿಜೆಪಿಯವರು ಯಾವ ರೀತಿ ದುರ್ಬಳಿಕೆ ಮಾಡ್ತಾ ಇದ್ದಾರೆ ಎನ್ನುವುದನ್ನು ಹೇಳಲು ಜನರು ಕಾಯ್ತಾ ಇದ್ದಾರೆ. ಎಲ್ಲಿ ಸತ್ಯ ಹೇಳಲು ಹೊರಟರೇ ನಮ್ಮ ವಿರುದ್ಧ ಯಾವ ಕೇಸು ದಾಖಲಿಸುತ್ತಾರೋ ಎನ್ನುವ ಭಯದ ವಾತಾವರಣ ಇದೆ. ಮುಂದಿನ 2 ವರ್ಷಗಳು ಮುಗಿದ ಬಳಿಕ ಈ ದೇಶದ ಹಾಗೂ ನಮ್ಮ ರಾಜ್ಯದ ಚಿತ್ರಣ ಬದಲಾಗಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಫಲಿತಾಂಶ ಬರುವುದಾಗಿ ತಿಳಿಸಿದರು.
ಕುಂದಾಪುರ ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಸುರೇಶ್ ಚಾತ್ರಾಬೆಟ್ಟು, ಶಂಕರ ಪೂಜಾರಿ ಬೀಜಾಡಿ, ಅನಿಲ್ ಹಾಗೂ ಸುನೀಲ್ ಇದ್ದರು.