ಉಡುಪಿ, ಏ 10 (DaijiworldNews/MS): ಲಂಚ ನೀಡಲ್ಲ ಎಂದು ಟೆಂಪೋ ಚಾಲಕನೋರ್ವನ ಮೇಲೆ ಶಿರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪೊಲೀಸರಿಂದ ಹಲ್ಲೆಗೊಳಗಾದ ಚಾಲಕನನ್ನು ಹಿರಿಯಡ್ಕ ನಿವಾಸಿ ಶೇಖರ್ ಪೂಜಾರಿ (65) ಎಂದು ಗುರುತಿಸಲಾಗಿದೆ.
ಹನುಮಂತಪ್ಪ ಎಂಬವರ ಮಾಲೀಕತ್ವದ ಟೆಂಪೋವನ್ನು ಶೇಖರ್ ಪೂಜಾರಿ ಚಲಾಯಿಸುತ್ತಿದ್ದು, ವಾಹನ ತಪಸಾಣೆ ನಡೆಸುತಿದ್ದ ಶಿರ್ವ ಪೋಲಿಸ್ ಸಿಬ್ಬಂದಿ ಮೂಡುಬೆಳ್ಳೆಯಲ್ಲಿ ಜಲ್ಲಿ ಸಾಗಾಟ ನಡೆಸುತಿದ್ದ ವೇಳೆ ೫೦೦ ರುಪಾಯಿ ಲಂಚ ಕೇಳಿದ್ದು ಈ ವೇಳೆ ಹಣವಿಲ್ಲವೆಂದಾಗ ವಾಹನ ಠಾಣೆಗೆ ತರಲು ಸೂಚಿಸಿ ಚಾಲಕನನ್ನು ಜೀಪ್ ಗೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಎದೆನೋವು, ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫಟನೆ ಕುರಿತು ದಾಯ್ಜಿವಲ್ಡ್ ಗೆ ಪ್ರತಿಕ್ರಿಯಿಸಿದ ಶಿರ್ವ ಎಸ್ ಐ ಶ್ರೀ ಶೈಲ ಅವರು "ಟೆಂಪೋ ಗೆ ಪರವಾನಿಗೆ ಇರಲಿಲ್ಲ ಈ ಕಾರಣದಿಂದ 500 ರೂಪಾಯಿ ದಂಡ ವಿದಿಸಲಾಗಿದೆ. ಆದರೆ ಚಾಲಕ ದಂಡ ಕಟ್ಟಲು ನಿರಾಕರಿಸಿ ಪೊಲೀಸ್ ಜೀಪ್ ಅಡಿಗೆ ಬಂದು ಮಲಗಲು ಪ್ರಯತ್ನ ಪಟ್ಟರು. ಆ ಸಂದರ್ಭದಲ್ಲಿ ನಾವು ವಾಹನವನ್ನು ಅಲ್ಲಿಯೇ ಬಿಟ್ಟು ಚಾಲಕನನ್ನು ಸ್ಟೇಶನ್ ಗೆ ಕರೆದುಕೊಂಡು ಬಂದು ಮಾಲಕರ ಸಮ್ಮುಖದಲ್ಲಿ ದಂಡ ಕಟ್ಟಿಸಿಕೊಂಡು ಕಳುಹಿಸಿಕೊಟ್ಟಿದ್ದೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.