ಉಳ್ಳಾಲ, ಏ.10 (DaijiworldNews/HR): ಬಡ ವ್ಯಾಪಾರಿಗಳ ಅನುಕೂಲಕ್ಕಾಗಿ ಮತ್ತು ಗ್ರಾಹಕರ ಸ್ನೇಹಿ ವ್ಯವಸ್ಥೆಯಾಗಿ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ ಬಳಿ ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಸ್ಥಾಪಿಸಲಾಗಿದ್ದು, ಪ್ರಧಾನಿ ಮೋದಿಯವರ ಕನಸಿನಂತೆ ಆತ್ಮನಿರ್ಭರ್ಗೆ ಪೂರಕ ಮಾದರಿ ಯೋಜನೆಯಾಗಿದೆ ಎಂದು ಗ್ಲೋಬಲ್ ಕಮರ್ಷಿಯಲ್ ಸೆಂಟರ್ನ ಅಬೂಬಕರ್ ಸಿದ್ದೀಖ್ ಹೇಳಿದರು.
ತೊಕ್ಕೊಟ್ಟು ಕಲ್ಲಾಪು ಮಾರುಕಟ್ಟೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, "5 ಎಕರೆ ಪ್ರದೇಶದಲ್ಲಿ 1.5 ಎಕರೆ ಪ್ರದೇಶವನ್ನು ವ್ಯಾಪಾರ ಉದ್ಯಮಕ್ಕೆ ಬಳಸಲಾಗಿದೆ. ಅದರಲ್ಲಿ 200 ರಷ್ಟು ತಾತ್ಕಾಲಿಕ ಶೆಡ್ ರೂಪದ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಹೊರ ಆವರಣದಲ್ಲಿ ರಖಂ ಮತ್ತು ಒಳಾಂಗಣದಲ್ಲಿ ಚಿಲ್ಲರೆ ಅಂಗಡಿಗಳಿರಲಿವೆ. ಉಳಿದ ಭಾಗವನ್ನು ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ಗೆ ಬಳಸಲಾಗುವುದು. ವ್ಯಾಪಾರಿಗಳಿಗೆ ಕೈಗೆಟಕುವ ಬಾಡಿಗೆ ಆಧಾರದಲ್ಲಿ ಯಾವುದೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ" ಎಂದರು.
"ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾದ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ, ಒಂದು ಡಿಸ್ಪೆನ್ಸರಿ, ರಿಯಾಯಿತಿ ದರದ ಕ್ಯಾಂಟೀನ್, ಸ್ನಾನ ಗೃಹ, ಆಧುನಿಕ ಮಾದರಿಯ 30 ಶೌಚಾಲಯಗಳು ಇರಲಿದದು, ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ, 8 ಭದ್ರತಾ ಸಿಬ್ಬಂದಿ ಕಾರ್ಯಾಚರಿಸಲಿದ್ದಾರೆ. ಪ್ರತಿ ಮಳಿಗೆಗೂ ವಿದ್ಯುತ್ ದೀಪ, ಸುತ್ತಲೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ನೆಲಕ್ಕೆ ಇಂಟರ್ ಲಾಕ್ ಅಳವಡಿಸಲಾಗಿದೆ. ಎಟಿಎಂ ಸಹಿತ ಬ್ಯಾಂಕಿಂಗ್ ವ್ಯವಸ್ಥೆ ಇರಲಿದೆ" ಎಂದಿದ್ದಾರೆ.
ಇನ್ನು"ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹೊರಗೆ ಹಾಕದೇ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್ಟಿಪಿ)ಯನ್ನು ನಿರ್ಮಿಸಲಾಗಿದೆ. ದಿನದಲ್ಲಿ ಎರಡು ಬಾರಿ ಸ್ಯಾನಿಟೈಸೇಶನ್ ಮಾಡಲಾಗುವುದು. ಸ್ವಚ್ಛತೆಗೆ ವಿಶೇಷ ಆದ್ಯತೆಯ ಜೊತೆಗೆ ಸುತ್ತಲೂ ಗಿಡ ನೆಡುವ ಯೋಜನೆಯೂ ಇದೆ.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸ್ಥಳಕ್ಕೆ ಭೇಟಿ ವ್ಯವಸ್ಥೆ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿಯವರಿಗೆ ವರದಿಯನ್ನು ಕಳಿಸುವಂತೆಯೂ ತಿಳಿಸಿದ್ದಾರೆ. ಶಾಸಕ ಯು.ಟಿ ಖಾದರ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಜಾಗದ ಮಾಲೀಕರ ಮನ್ಸೂರ್, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯೂಬ್ ಮಂಚಿಲ, ಉದ್ಯಮಿಗಳಾದ ಪಿ.ಇಸ್ಮಾಯಿಲ್ ಅಹಮ್ಮದ್ ಎನ್.ಜಿ.ಸಿ, ಇಸ್ಮಾಯಿಲ್, ಮೊಯ್ದೀನ್, ಅಹಮ್ಮದ್ ಮನ್ಸೂರ್, ಇಬ್ರಾಹಿಂ, ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಸ್ಥಳೀಯ ಆಸೀಫ್ ಉಪಸ್ಥಿತರಿದ್ದರು.