ಉಡುಪಿ, ಏ. 09 (DaijiworldNews/SM): ಜಿಲ್ಲೆಯಲ್ಲಿ ಜಿಲ್ಲಾಡಳಿತ ಕೊರೊನಾ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಿ, ಅಂತರಕಾಯ್ದು ಕೊಳ್ಳಿ ಎಂದು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲಲ್ಲಿ ದಂಡವನ್ನೂ ವಿಧಿಸುತ್ತಿದ್ದಾರೆ. ಶುಕ್ರವಾರ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪಂಚಾಯತ್ ನ ಕೆಲವು ಸದಸ್ಯರು ಸೇರಿದಂತೆ ಇಓ ಕೂಡ ಮಾಸ್ಕ್ ಇಲ್ಲದೆ ಅಂತರವಿಲ್ಲದೆ ಸಭೆ ನಡೆಸಿದ್ದು ಮಾತ್ರ ಕೊರೊನಾ ಬಗೆಗಿರುವ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.
ಮಾಧ್ಯಮಗಳು ಕೆಮರಾ ಮುಂದಿಟ್ಟಾಗ ಕುತ್ತಿಗೆ, ಬದಿಯಲ್ಲಿದ್ದ ಮಾಸ್ಕ್ ನ್ನು ಮುಖಕ್ಕೆ ಏರಿಸಿಕೊಂಡದ್ದು ಕಂಡು ಬಂತು. ಅಧಿಕಾರಿಗಳು, ಜನಪ್ರತಿನಿಧಿಗಳು ಮಾಸ್ಕ್ ಧರಿಸದೇ ಇದ್ದಾಗ ಸಾರ್ವಜನಿಕರು ಹೇಗೆ ತಾನೆ ಎಚ್ಚೆತ್ತು ಕೊಳ್ಳುತ್ತಾರೆ? ಎಂದು ಮೊದಲು ಆಲೋಚಿಸಬೇಕಾಗುತ್ತದೆ.
ತಾಲೂಕು ಪಂಚಾಯತ್ ನಲ್ಲಿ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳೇ ಮಾಸ್ಕ್ ಧರಿಸದೆ ಸಭೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಇದೀಗ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ. ಜನಸಾಮಾನ್ಯರಿಗೆ ದಂಡ ವಿದಿಸುವ ನೈತಿಕತೆ ಅಧಿಕಾರಿಗಳಿಗೆ ಎಲ್ಲಿದೆ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆ:
ಇನ್ನು ಉಡುಪಿ ಮಲ್ಲಿಗೆಗೆ ರಾಜ್ಯಮಟ್ಟದಲ್ಲಿ ಮಾನ್ಯತೆ ಇದೆ. ಆದರೆ ಶಂಕರಪುರ ಮಲ್ಲಿಗೆ ಅಷ್ಟೊಂದು ಪ್ರಚುರತೆ ಪಡೆದು ಕೊಂಡಿಲ್ಲ. ಹಾಗಾಗಿ ಯಾರು ಶಂಕರಪುರ ಮಲ್ಲಿಗೆಯನ್ನು ಐದು ಸೆಂಟ್ಸ್ ಜಾಗದಲ್ಲಿ ನೆಡುತ್ತಾರೋ ಅವರಿಗೆ ಸರಕಾರದಿಂದ ರೂ ೬೦೦೦ ಸಹಾಯ ಧನ ಸಿಗಲಿದೆ. ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.
ಅಲ್ಲದೆ ಇತ್ತೀಚೆಗೆ ಮರಳು ಮತ್ತು ಜಲ್ಲಿ ಕಟ್ಟಡ ಸಲಕರಣೆಗಳನ್ನು ಕೊಂಡೊಯ್ಯುವಾಗ ರಸ್ತೆಯಲ್ಲಿ ಪೊಲೀಸರು ಅಡ್ಡಗಟ್ಟುತ್ತಾರೆ. ಇದರಿಂದ ತುರ್ತಾಗಿ ಬೇಕಾದ ಮನೆ ನಿರ್ಮಾಣ ಮಾಡಲು ಕಷ್ಟಕರವಾಗಿದೆ. ಇದನ್ನು ಸಂಬಂಧ ಪಟ್ಟ ಇಲಾಖೆಗೆ ತಿಳಿಸಿ ಬಗೆಹರಿಸುವಂತೆ ಉಡುಪಿ ತಾಲೂಕು ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಅವರಲ್ಲಿ ಧನಂಜಯ ವಿನಂತಿಸಿ ಕೊಂಡರು.