ಉಡುಪಿ, ಏ. 09 (DaijiworldNews/SM): ಉಡುಪಿ ಹಾಗೂ ಮಣಿಪಾಲದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿರುವುದಕ್ಕೆ ಶಾಸಕ ರಘುಪತಿ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸುಧಾರಿಸುತ್ತಿರುವ ಆರ್ಥಿಕ ಚಟುವಟಿಕೆ ಮೇಲೆ ನೈಟ್ ಕರ್ಫ್ಯೂ ಪರಿಣಾಮ ಬೀಳಲಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಕೋಲ, ನೇಮ, ಯಕ್ಷಗಾನದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಇವುಗಳಿಗೆ ನೈಟ್ ಕರ್ಫ್ಯೂನಿಂದ ಅಡ್ಡಿಯಾಗಲಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಮಣಿಪಾಲದಲ್ಲಿ ನೈಟ್ ಕರ್ಫ್ಯೂ ತೆರವುಗೊಳಿಸಲು ಸಿಎಂ ಗೆ ಮನವಿ ಮಾಡಿದ್ದೇನೆ ಎಂಬುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಬಾರಿ ಕೂಡಾ ಕೋವಿಡ್ ನಿಂದಾಗಿ ಕೋಲ, ನೇಮ ನಡೆದಿಲ್ಲ. ಇದರಿಂದಾಗಿ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 401 ಆ್ಯಕ್ಟಿವ್ ಪ್ರಕರಣಗಳಿವೆ. ಎಂಐಟಿಯಲ್ಲಿ ಕೂಡಾ ಈಗಾಗಲೇ ಕಂಟೈನ್ ಮೆಂಟ್ ಜೋನ್ ಮಾಡಲಾಗಿದೆ. ಇಲ್ಲಿ ಕೂಡಾ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದೆ. ನಾವು ಪ್ರತಿದಿನ 2,500 ಜನರನ್ನು ತಪಾಸಣೆ ಮಾಡುತಿದ್ದೇವೆ. ಇದರಲ್ಲಿ ಕೇವಲ 50-60 ಜನರಿಗೆ ಮಾತ್ರ ಪಾಸಿಟಿವ್ ಬರುತ್ತಿದೆ. ಸದ್ಯ ಉಡುಪಿ ಮಣಿಪಾಲದಲ್ಲಿ ನೈಟ್ ಕರ್ಫ್ಯೂ ಅಗತ್ಯ ಇಲ್ಲ. ಉಡುಪಿ ಮಣಿಪಾಲವನ್ನು ನೈಟ್ ಕರ್ಫ್ಯೂ ಪಟ್ಟಿಯಿಂದ ಹೊರಗಿಡಬೇಕೆಂದು ಸಿಎಂ ಗೆ ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಕೋಲ, ನೋಮೋತ್ಸವಕ್ಕೆ ಅವಕಾಶ ನೀಡಿ-ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ನಗರದಲ್ಲಿ ರಾತ್ರಿ ವೇಳೆ ನಡೆಯುವಂತ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಸರಕಾರವು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ನಡೆಸಲು ಅವಕಾಶ ಕಲ್ಪಿಸಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕೋವಿಡ್-19 ಕಾರಣದಿಂದ ಕಳೆದ ವರ್ಷವೂ ಕೂಡ ಎಲ್ಲಾ ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಸಾಧ್ಯವಾಗಿಲ್ಲ. ಮತ್ತೆ ಈ ವರ್ಷವೂ ಕೂಡ ಧಾರ್ಮಿಕ ಕಾರ್ಯಕ್ರಮಗಳು ನಿಂತು ಹೋದರೆ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮುಖ್ಯಮಂತ್ರಿಗಳು ಹಾಗೂ ಸರಕಾರಕ್ಕೆ ಶಾಸಕನ ನೆಲೆಯಲ್ಲಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಸರಳವಾಗಿ ಈಗಾಗಲೇ ನಿಗದಿಪಡಿಸಿದ ಕೋಲ, ನೇಮ, ಯಕ್ಷಗಾನ, ನಾಗಾರಾಧನೆ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕೆಂದು ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.