ಉಡುಪಿ, ಏ. 09 (DaijiworldNews/HR): ಧಾರ್ಮಿಕ ಕಾರ್ಯಕ್ರಮಗಳಿಗೆ ತಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಣಿಪಾಲಕ್ಕೆ ವಿಧಿಸಿರುವ ರಾತ್ರಿ ಕರ್ಫ್ಯೂ ಹಿಂಪಡೆಯುವಂತೆ ಶಾಸಕ ರಘುಪತಿ ಭಟ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮಣಿಪಾಲ ಮತ್ತು ಉಡುಪಿಯಲ್ಲಿ ನೈಟ್ ಕರ್ಫ್ಯೂವನ್ನು ಹಿಂಪಡೆಯಬೇಕು. ಈ ಭಾಗದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯ ವೇಳೆ ನಡೆಯುವುದರಿಂದ ನೈಟ್ ಕರ್ಫ್ಯೂ ಮಾಡಿದರೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ" ಎಂದರು.
ಇನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೈವಾರಾಧನೆ, ಕೋಲ, ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಳೆದ ವರ್ಷ ಕೂಡ ಕೊರೊನಾ ಕಾರಣದಿಂದ ಈ ಯಾವ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿಲ್ಲ. ಕೆಲವರು ಈಗಗಾಲೇ ಕೋಲ ಮತ್ತು ದೈವಾರಾಧನೆಗೆ ದಿನಾಂಕ ನಿಗದಿ ಮಾಡಿದ್ದು, ಇವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಕಾರಣ ರಾತ್ರಿ ಕರ್ಫ್ಯೂವನ್ನು ಮಣಿಪಾಲ ಮತ್ತು ಉಡುಪಿಯಲ್ಲಿ ತೆರವು ಮಾಡಬೇಕೆಂದು ಶಾಸಕ ರಘುಪತಿ ಭಟ್ ಸಿಎಂಗೆ ಮನವಿ ಮಾಡಿದ್ದಾರೆ.