ಮಂಗಳೂರು, ಏ. 09 (DaijiworldNews/HR): ನಾಗುರಿ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ ಮತ್ತು ಬೈಕು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಪೊಳಲಿ ನಿವಾಸಿ ಮಹಮ್ಮದ್ ಶಾಫಿ (20) ಎಂದು ಗುರುತಿಸಲಾಗಿದೆ.
ಸಹ ಸವಾರರಾದ ರಾಣಿಪುರ ನಿವಾಸಿ ಮಹಮ್ಮದ್ ಇಮ್ರಾನ್ (20) ಮತ್ತು ಕಲ್ಲಡ್ಕ ನಿವಾಸಿ ಮಹಮ್ಮದ್ ಮೌಸೀನ್ (23) ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ವ್ಯಕ್ತಿ ಹಾಗೂ ಆತನ ಸ್ನೇಹಿತರು ರಾಣಿಪುರದಲ್ಲಿರುವ ತಮ್ಮ ಸ್ನೇಹಿತನನ್ನು ಭೇಟಿಯಾಗಲು ಬೈಕ್ನಲ್ಲಿ ತೆರಳುತ್ತಿದ್ದರು. ಬೈಕ್ ಕುತ್ತಾರು ಕೊರಗಜ್ಜನ ಕಟ್ಟೆ ಬಳಿ ತಲುಪಿದಾಗ ಬಸ್ವೊಂದು ಓವರ್ ಟೇಕ್ ಮಾಡುವ ಅವಸರದಲ್ಲಿ ಎದುರು ಕಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಶಾಫಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ನಾಗುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.