ಮಂಜೇಶ್ವರ, ಎ.09 (DaijiworldNews/PY): ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ಉಪ್ಪಳದ ರೌಫ್ (47) ಹಾಗೂ ಕೋಜಿಕ್ಕೋಡ್ನ ಶೈಜು ( 38) ಎಂದು ಗುರುತಿಸಲಾಗಿದೆ.
ಎಪ್ರಿಲ್ 8ರ ಗುರುವಾರ ರಾತ್ರಿ ಉಪ್ಪಳ ಬಳಿ ಹೊರ ರಾಜ್ಯ ಕಾರ್ಮಿಕನ ಮೊಬೈಲ್ ಅಪಹರಿಸಿ ಪರಾರಿಯಾಗಲೆತ್ನಿಸಿದ ಇಬ್ಬರನ್ನು ನಾಗರಿಕರು ಹಿಡಿದು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ನಡೆಸಿದಾಗ ಹಲವು ಕೃತ್ಯಗಳು ಬೆಳಕಿಗೆ ಬಂದಿವೆ.
ರೌಫ್ ಎರಡು ತಿಂಗಳ ಹಿಂದೆ ಉಪ್ಪಳದ ಪ್ರಧಾನ ಅಂಚೆ ಕಚೇರಿಯಿಂದ ಹಣ ಕಳವುಗೈದ ಹಾಗೂ ದಾಖಲೆ ಪತ್ರಗಳನ್ನು ಹಾನಿಗೈದ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಶೈಜು ವಿರುದ್ಧ ಆದೂರು, ಬದಿಯಡ್ಕ, ಕಾಸರಗೋಡು, ಕುಂಬಳೆ, ಕೋಜಿಕ್ಕೋಡ್, ಕೊಯಿಲಾಂಡಿ ಮೊದಲಾದ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಿಂಗಳ ಹಿಂದೆ ಉಪ್ಪಳ ಮಣಿಮುಂಡದ ಅರ್ಷದ್ ಎಂಬಾತನನ್ನು ಇರಿದು ಗಾಯಗೊಳಿಸಿದ ಹಾಗೂ ದೂರು ನೀಡಿ ಮಂಜೇಶ್ವರ ಪೊಲೀಸ್ ಠಾಣೆಯಿಂದ ವಾಹನದಲ್ಲಿ ಮರಳುತ್ತಿದ್ದಾಗ ಬೆದರಿಸಿದ್ದ ಪ್ರಕಣದಲ್ಲೂ ರೌಫ್ ಆರೋಪಿಯಾಗಿದ್ದಾನೆ. ತಿಂಗಳುಗಳ ಹಿಂದೆ ಪಚ್ಚಂಬಳದಲ್ಲಿ ಅಂಗಡಿಗಳಿಂದ ಬೀಗ ಮುರಿದು ಕಳವು ನಡೆಸಿದ ಪ್ರಕರಣದಲ್ಲೂ ಶೈಜು ಆರೋಪಿಯಾಗಿದ್ದು, ಸಿಸಿಟಿವಿ ದ್ರಶ್ಯಗಳಲ್ಲಿ ಈತನ ಗುರುತು ಪತ್ತೆ ಹಚ್ಚಲಾಗಿದೆ.
ಕುಂಜತ್ತೂರು, ಹೊಸಂಗಡಿ, ಉಪ್ಪಳ, ಆರಿಕ್ಕಾಡಿ, ಬದಿಯಡ್ಕ, ಉಪ್ಪಳ ಮೊದಲಾದೆಡೆಗಳಲ್ಲೂ ಭಾರೀ ಪ್ರಮಾಣದ ಕಳವು ನಡೆಸಿದ್ದನು.
ಎರಡು ದಿನಗಳ ಹಿಂದೆ ಮುಂಜಾನೆ ಸೀತಾಂಗೋಳಿಯಲ್ಲಿ ಬೇಕರಿಯ ಬೀಗ ಮುರಿದು ಕಳವಿಗೆತ್ನಿಸುತ್ತಿದ್ದಾಗ ಪೊಲೀಸರನ್ನು ಕಂಡು ಇಬ್ಬರು ಬೈಕ್ನಲ್ಲಿ ಪರಾರಿಯಾಗಿದ್ದು, ಈ ಪೈಕಿ ಓರ್ವ ಶೈಜು ಎಂದು ಪೊಲೀಸರು ತಿಳಿಸಿದ್ದಾರೆ.