ಉಡುಪಿ, ಏ 9(DaijiworldNews/MS): ಇತ್ತೀಚೆಗೆ ಅಮಾನತುಗೊಂಡ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮಂಜುಳಾ ಅವರು ತನ್ನನ್ನು ನಿವೃತ್ತ ಶಿಕ್ಷಕ ಎಂದು ಹೇಳುವ ಬದಲು, ಆರೋಪ ಮಾಡುವಾಗ ದಲಿತ ಸಂಘರ್ಷ ಸಮಿತಿಯ ಮುಖಂಡ ಎಂದು ಸಂಘಟನೆಯ ಪದ ಬಳಕೆ ಮಾಡಿರುವುದಕ್ಕೆ, ಮಂಜುಳಾ ಅವರ ಮೇಲೆ ಮಾನನಷ್ಟ ಕೇಸು ದಾಖಲು ಮಾಡುತ್ತೇನೆ, ಎಂದು ಕೊಡವೂರು ಶಾಲೆಯ ನಿವೃತ್ತ ಶಿಕ್ಷಕ ಸುಂದರ್ ಮಾಸ್ತರ್ ಎಚ್ಚರಿಕೆ ನೀಡಿದ್ದಾರೆ.
ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, 'ಮಂಜುಳಾ ಅರ್ಹ ಕ್ಷೇತ್ರ ಶಿಕ್ಷಣಾಧಿಕಾರಿಯೇ ಅಲ್ಲ. ಮುಖೋಪಾಧ್ಯಾಯ ಶ್ರೇಣಿಯಲ್ಲಿರುವವರು. ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಮಂದಿಗೆ ದೌರ್ಜನ್ಯವೆಸಗಿದ್ದಾರೆ. ತನ್ನ ವಿರುದ್ದ ಬಂದ ಅನಾಮಧೇಯ ಪತ್ರಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ಸರಕಾರಿ ಶಾಲೆಗಳ ಸಿಗಬೇಕಾದ ಸೌಲಭ್ಯವನ್ನು ತಡೆಹಿಡಿದಿದ್ದಾರೆ ಎಂದು ಮಾಸ್ತರ್ ಆರೋಪ ಮಾಡಿದ್ದಾರೆ
ಪುಸ್ತಕ, ಸಮವಸ್ತ್ರಗಳನ್ನು ಶಾಲೆಗಳಿಗೆ ಸರಬರಾಜು ಮಾಡಬೇಕೆನ್ನುವ ನಿಯಮ ಇದ್ದರೂ ಶಾಲೆಯ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೆ ಬಂದು ತೆಗೆದುಕೊಂಡು ಹೋಗುವಂತೆ ಮಾಡಿ ಸರಬರಾಜು ಮಾಡಲಾಗಿದೆ ಎಂದು ಸುಳ್ಳು ವರದಿ ಕೊಟ್ಟು ಆ ಹಣವನ್ನು ವಂಚನೆ ಮಾಡಿದ್ದಾರೆ. 2019 ರಲ್ಲಿ ತಮ್ಮ ಪೆನ್ಶನ್ ಪೇಪರ್ ಸಿಗಬೇಕಾದರೆ 50000 ಲಂಚ ಕೊಡಬೇಕೆಂದು ಮಂಜುಳಾರವರು ಬೇಡಿಕೆ ಇಟ್ಟಿದ್ದಾರೆ. ಮಾತ್ರವಲ್ಲದೆ ಇಲಾಖೆಯ ವಾಹನವನ್ನು ದುರುಪಯೋಗ ಮಾಡಿಕೊಂಡು ಇಲಾಖೆಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಇದೆಲ್ಲದರ ವಿರುದ್ದ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತವಾದ ತನಿಖೆ ನಡೆಸಬೇಕು ಎಂದು ಸುಂದರ್ ಮಾಸ್ತರ್ ಅಗ್ರಹಿಸಿದ್ದಾರೆ.