ಉಡುಪಿ, ಏ 9(DaijiworldNews/MS): ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ 8 ನಗರದಲ್ಲಿ ಕೊರೊನಾ ಕರ್ಪ್ಯೂ ಜಾರಿಗೊಳಿಸಿರುವ ಹಿನ್ನಲೆಯಲ್ಲಿ, " ಮಣಿಪಾಲ ಮತ್ತು ಉಡುಪಿ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಿ ಪ್ರಮುಖ ಜಂಕ್ಷನ್ನಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು" ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಏ.9 ರ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, " ಕೊರೊನಾ ಕರ್ಪ್ಯೂ ಹಿನ್ನಲೆಯಲ್ಲಿ , ಉಡುಪಿ ಮಣಿಪಾಲ ನಗರದಲ್ಲಿ ನೈಟ್ ರೌಂಡ್ಸ್ ಹೆಚ್ಚಿಸುತ್ತೇವೆ ,ಮಾತ್ರವಲ್ಲದೆ ಪ್ರವಾಸಿ ತಾಣಗಳ ಮೇಲೂ ವಿಶೇಷ ನಿಗಾ ಇರಿಸುತ್ತೇವೆ. ಅಲ್ಲದೆ ರಾತ್ರಿ ಕರ್ಪ್ಯೂ ಹಿನ್ನಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್ ಕ್ಲಬ್ ಪಬ್ ಮುಚ್ಚಲು ಹಾಗೂ ತೆರೆಯಲು ಸಮಯ ನಿಗದಿ ಮಾಡುತ್ತೇವೆ 'ಎಂದು ಹೇಳಿದ್ದಾರೆ
"ಎಸ್ ಪಿ ರಾಂಕ್ ಅಧಿಕಾರಿ ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿ ಇವರಿಗೆ ಕೊರೋನಾ ಕರ್ಫ್ಯೂ ಸಂಪೂರ್ಣ ಜಾರಿಗೆ ತರಲು ಜವಾಬ್ದಾರಿ ನೀಡಲಾಗುವುದು. ಜೊತೆಗೆ ಮಾಸ್ಕ್, ಸಾಮಾಜಿಕ ಅಂತರ ಕಡೆ ವಿಶೇಷ ಗಮನ ನೀಡಲಿದ್ದು, ಇದರೊಂದಿಗೆ ಅವಿಭಜಿತ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸಿ ಎರಡು ಜಿಲ್ಲೆಗೂ ನಿಯಮ ರೂಪಿಸುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.