ಕಣ್ಣೂರು, ಏ 7 (DaijiworldNews/MS): ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಏ.7 ರ ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಪ್ರತ್ಯೇಕ ಘಟನೆಗಳಲ್ಲಿ ಕಾಲಿನಡಿಯಲ್ಲಿ ಹಾಗೂ ಗುದದ್ವಾರದಲ್ಲಿ ಮುಚ್ಚಿಟ್ಟು ಸಾಗಣೆ ನಡೆಸಿದ್ದ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರಿಂದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ
ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ ಮೊದಲ ಪ್ರಕರಣದಲ್ಲಿ ಶಾರ್ಜಾದಿಂದ ಏರ್ ಇಂಡಿಯಾ ವಿಮಾನ ಐಎಕ್ಸ್ 746 ರಲ್ಲಿ ಶಾರ್ಜಾದಿಂದ ಆಗಮಿಸಿದ್ದ ಮುಹಮ್ಮದ್ ಅಶ್ರಫ್ ಎಂಬಾತ ಚಿನ್ನದ ಗಟ್ಟಿಗಳನ್ನು ಕಾಲುಗಳ ಅಡಿಯಲ್ಲಿ ಮರೆಮಾಚಿಸಿ ಕಳ್ಳ ಸಾಗಾಟಕ್ಕೆ ಪ್ರಯತ್ನಿಸಿದ್ದಾನೆ. ಎರಡನೇ ಪ್ರಕರಣದಲ್ಲಿ ಗೋಏರ್ ವಿಮಾನದ ಮೂಲಕ ಆಗಮಿಸಿದ ರಿಜೀಶ್ ಎಂಬಾತ ಚಿನ್ನದ ಪೇಸ್ಟ್ ನ್ನು 4 ಕ್ಯಾಪ್ಸುಲ್ಗಳ ಮೂಲಕ ಗುದನಾಳದಲ್ಲಿ ಅಡಗಿಸಿಟ್ಟದ್ದ. ಮೂರನೇ ಪ್ರಕರಣದಲ್ಲಿ ಗುಪ್ತಚರ ಘಟಕ ಮಾಹಿತಿ ನೀಡಿದ್ದು , ಶಾರ್ಜಾದಿಂದ ಗೋ ಏರ್ ಮೂಲಕ ಆಗಮಿಸಿದ್ದ ಪ್ಯಾಕ್ಸ್ ಮೊಹಮ್ಮದ್ ಕಲನಾಡ್ ಎಂಬಾತ ಪಾದದಡಿಯಲ್ಲಿ ಚಿನ್ನ ಕಳ್ಳ ಸಾಗಾಟಕ್ಕೆ ಪ್ರಯತ್ನಿಸಿದ್ದಾನೆ.
ಒಟ್ಟಾರೆ ಈ ಮೂರು ಪ್ರಕರಣದಲ್ಲಿ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು 1.30ಕೋಟಿ ರೂ. ಮೌಲ್ಯದ ಒಟ್ಟು 2.8 ಕಿ.ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.