ಉಡುಪಿ, ಏ 7 (DaijiworldNews/MS): ಆರನೇ ವೇತನ ಆಯೋಗದ ಶಿಫಾರಸು ಅನ್ವಯಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೆ, ಉಡುಪಿಯ ಡಿಪೋದಲ್ಲಿ ಮೆಕ್ಯಾನಿಕ್ ಶ್ರೀಕಾಂತ್ ರೆಡ್ಡಿ ಕಣ್ಣೀರು ಸುರಿಸುತ್ತಾ ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.
ಆರನೇ ವೇತನ ಆಯೋಗದ ಸೌಲಭ್ಯ ಒದಗಿಸಬೇಕು ಎಂದು ಇದರ ನೌಕರರು ಪ್ರತಿಭಟಿಸುತ್ತಿದ್ರೆ, ನಮ್ಮ ಮ್ಯಾನೇಜರ್ ನನ್ನನ್ನು ಕೂಡಿ ಹಾಕಿ ಡ್ಯೂಟಿ ಮಾಡುವಂತೆ ಬೆದರಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. " ನನ್ನನ್ನು ಇಲ್ಲಿ ಕೂಡಿ ಹಾಕಿ ಡ್ಯೂಟಿ ಮಾಡಿಸಲಾಗುತ್ತಿದೆ. ಮುಷ್ಕರ ದಿನವೂ ನಾನು ಯಾಕೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ? ಮ್ಯಾನೇಜರ್ ನನ್ನನ್ನು ಬೆಳಗ್ಗೆ ಲಾಕ್ ಮಾಡಿ ಹೊರಗೆ ಹೋಗದಂತೆ ತಡೆದಿದ್ದಾರೆ.ಕೇಸ್ ಕ್ಲಿಯರ್ ಆಗೋವರೆಗೆ ಡ್ಯೂಟಿ ಮಾಡಬೇಕು ಎಂದು ಭಯ ಹುಟ್ಟಿಸಿದ್ದಾರೆ.ನಾನೊಬ್ಬ ಬಡವ, ಕೆ.ಎಸ್.ಆರ್.ಟಿ.ಸಿ ಬಿಟ್ಟರೆ ಬೇರೆನೂ ಗೊತ್ತಿಲ್ಲ ಈ ಸಂಸ್ಥೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇನೆ.ನನಗೆ ಭಯ ಹುಟ್ಟಿಸಿದ್ದ ರಿಂದ ನಾನು ಇಲ್ಲಿ ಡ್ಯೂಟಿ ಮಾಡುತ್ತಿದ್ದೇನೆ,ನಮಗೆ ಆರನೇ ವೇತನ ಆಯೋಗದ ಸೌಲಭ್ಯ ಯಾಕೆ ಬೇಕು ಗೊತ್ತಾ?ನಿಮ್ಮ(ಅಧಿಕಾರಿ) ಬಳಿ ಹಣವಿದೆ ಆದರೆ (ಕೆಲ ವರ್ಗದ ಸಿಬ್ಬಂದಿಗಳು )ನಮ್ಮ ಬಳಿ ಹಣವಿಲ್ಲ ಅದಕ್ಕಾಗಿ ಸಂಬಳ ಏರಿಕೆ ಕೇಳುತ್ತಿದ್ದೇವೆ "ಎಂದು ನೊಂದು ನುಡಿದಿದ್ದಾರೆ
"ರಾಜಕಾರಣಿಗಳಿಗೆ ನಮ್ಮಂತವರ ಕಷ್ಟ ಅರ್ಥವಾಗುವುದಿಲ್ಲ, ನಾವು ಮತ ಹಾಕಿರುವುದರಿಂದ ಇವರೆಲ್ಲ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹತ್ತಿರ ಹಣವಿದ್ದರೆ ನಾನೇ ರಾಜಕಾರಣ ಮಾಡುತ್ತಿದ್ದೆ.ಅರ್ಚಕರಿಗೆ ಆರನೇ ವೇತನ ಆಯೋಗದ ವೇತನ ಕೊಡುತ್ತಾರೆ ನಾವೇನು ಸತ್ತಿದ್ದೀವಾ? ನಿಮ್ಮ ಸ್ವಂತಕ್ಕೆ ನೀವು ರಾಜಕಾರಣ ಮಾಡುವುದಲ್ಲ ಜನರ ಸೇವೆ ಮಾಡಿ. ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವವರು ನೀವು ಶಾಸಕ ಮಂತ್ರಿಗಳು, ನಿಮ್ಮ ಜಾತಿ ರಾಜಕೀಯ ಸುಡುಗಾಡು ಸೇರಲಿ ಎಂದು ಸಿಬ್ಬಂದಿ ಶ್ರೀಕಾಂತ್ ರಾಜಕಾರಣಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿ ಆಕ್ರೋಶ ವ್ಯಕ್ತಪಡಿಸಿದರು.