ಮಂಗಳೂರು, ಎ.06 (DaijiworldNews/PY): "ಆರನೇ ವೇತನ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಯುತ್ತಿದ್ದು, ಇಂದು ಕೆಲ ಸಿಬ್ಬಂದಿಗಳನ್ನು ಬಿಟ್ಟರೆ ಯಾರು ಕೂಡಾ ಕರ್ತವ್ಯಕ್ಕೆ ಹಾಜರಾಗಿಲ್ಲ. ನಿಷ್ಠಾವಂತ ನೌಕರರು ಬಂದರೆ ಅವರಿಗೆ ಭದ್ರತೆ ಕೊಟ್ಟು ಬಸ್ ಆಪರೇಟ್ ಮಾಡಿಸುತ್ತೇವೆ" ಎಂದು ಕೆಎಸ್ಆರ್ಟಿಸಿ ಡಿಸಿ ಅರುಣ್ ಕುಮಾರ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಮಂಗಳೂರಿನಲ್ಲಿ ಸಾರಿಗೆ ಸಂಪೂರ್ಣ ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇಂದು ಕೆಲ ಸಿಬ್ಬಂದಿಗಳನ್ನು ಬಿಟ್ಟರೆ ಯಾರು ಕೂಡಾ ಕರ್ತವ್ಯಕ್ಕೆ ಹಾಜರಾಗಿಲ್ಲ. ನಿಷ್ಠಾವಂತ ನೌಕರರು ಬಂದರೆ ಅವರಿಗೆ ಭದ್ರತೆ ಕೊಟ್ಟು ಬಸ್ ಆಪರೇಟ್ ಮಾಡಿಸುತ್ತೇವೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇವೆ. ಖಾಸಗಿ ಬಸ್ಗಳು ಹಾಗೂ ಖಾಸಗಿ ವಾಹನಗಳನ್ನು ಬಸ್ಸ್ಟಾಂಡ್ಗೆ ಕರೆಸುತ್ತಿದ್ದೇವೆ. ಕೇಂದ್ರ ಕಚೇರಿಯ ಸೂಚನೆ ಸಿಕ್ಕಲ್ಲಿ ಖಾಸಗಿ ಡ್ರೈವರ್ಗಳನ್ನು ಬಳಿಸಿ ಆಪರೇಟ್ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನಗರದಲ್ಲಿ ಬಸ್ಗಳು ರಸ್ತೆಗೆ ಇಳಿಯದೇ ಇದ್ದು, ಬಸ್ಗಳು ಇಲ್ಲದೇ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಸರ್ಕಾರ ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಕೆಎಸ್ಆರ್ಟಿಸಿ ನೌಕರರ ಮುಷ್ಕರದಿಂದ ಬಸ್ ಬಂದ್ ಹಿನ್ನೆಲೆ, ಮಂಗಳೂರು ವಿವಿಯ ಎಲ್ಲಾ ಪದವಿ ಪರೀಕ್ಷೆಗಳನ್ನು ಹಾಗೂ ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪದವಿ ಪರೀಕ್ಷೆಗಳು ಕೆಲ ದಿನಗಳ ಹಿಂದೆಯಷ್ಟೇ ಆರಂಭವಾಗಿದ್ದು, ಇದೀಗ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕ ನಿಗದಿಪಡಿಸುವವರೆಗೆ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಮಂಗಳೂರು ವಿವಿ ಪ್ರಕಟಣೆ ಹೊರಡಿಸಿದೆ.
ಸರ್ಕಾರಿ ಬಸ್ಗಳು ಸ್ಥಗಿತಗೊಂಡ ಕಾರಣ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದೊಳಗೆ ಖಾಸಗಿ ಬಸ್ಗಳು ಬಂದಿದ್ದು, ಕೆಎಸ್ಆರ್ಟಿಸಿ ಕಡೆಯಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಮೈಸೂರು ಸೇರಿದಂತೆ ವಿವಿಧ ಭಾಗಗಳಿಗೆ ತೆರಳಲು ಖಾಸಗಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಮತ್ತಷ್ಟು ಖಾಸಗಿ ಬಸ್ಗಳನ್ನು ಬಳಸಲು ಸಿದ್ದತೆ ಮಾಡಲಾಗುತ್ತದೆ.