ಬೆಳ್ಮಣ್, ಏ 7 (DaijiworldNews/MS): ಅವೈಜ್ಞಾನಿಕ ಚರಂಡಿ ನಿರ್ಮಾಣ ಕಾಮಗಾರಿಯಿಂದ ರಸ್ತೆಯ ಮಧ್ಯದಲ್ಲಿ ತೋಡಲಾಗಿದ್ದ ಚರಂಡಿಯ ಹೊಂಡಕ್ಕೆ ಬೈಕ್ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ಸಚ್ಚೇರಿಪೇಟೆಯಲ್ಲಿ ನಡೆದಿದೆ.
ಬೆಳ್ಮಣ್ ನಿಂದ ಮೂಡಬಿದ್ರೆ ಸಾಗುವ ಹೆದ್ದಾರಿಯಲ್ಲಿ ಸಚ್ಚೇರಿಪೇಟೆ ಸಮೀಪದ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರರು ಯಾವುದೇ ಸೂಚನಾ ಫಲಕ ಹಾಕದ ಕಾರಣ ಬೈಕ್ ಸವಾರ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.ಬೈಕ್ ಸವಾರ ಬೋಳ ನಿವಾಸಿ ದಿನೇಶ್ ಪೂಜಾರಿ ಗಂಭೀರ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಒಂದು ವಾರದ ಹಿಂದೆ ಇದೇ ಚರಂಡಿ ಹೊಂಡದ ಗೋಚರವಿಲ್ಲದೆ ಬೈಕ್ ಸವಾರ ಬಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಾಗೂ ಜಾರಿಗೆಕಟ್ಟೆ ಸಮೀಪದ ಅಲಂಗಾರು ಗುಡ್ಡೆ ಎಂಬಲ್ಲಿಯೂ ಚರಂಡಿಯ ಹೊಂಡಕ್ಕೆ ಕಾರೊಂದು ಬಿದ್ದು ನಜ್ಜು ಗುಜ್ಜಾದ ಘಟನೆಯೂ ನಡೆದಿತ್ತು.
ಪದೇ ಪದೇ ಚರಂಡಿ ಕಾಮಗಾರಿಗೆ ತೋಡಲಾದ ಹೊಂಡಕ್ಕೆ ಬೈಕ್ ಕಾರುಗಳು ಬಿದ್ದು ಸವಾರರು ಗಾಯಗೊಳ್ಳುತ್ತಿದರೂ ಗುತ್ತಿಗೆದಾರ ಮಾತ್ರ ಏನು ಆಗದಂತೆ ಅವೈಜ್ಞಾನಿಕ ಕಾಮಗಾರಿಯನ್ನು ಮತ್ತೆ ನಡೆಸುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.