ಮಂಗಳೂರು, ಎ.04 (DaijiworldNews/MB) : ನಾಪತ್ತೆಯಾಗಿದ್ದ ಬಾಲಕನ ಶವವು ಏಪ್ರಿಲ್ 4 ರ ಭಾನುವಾರ ಮುಂಜಾನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆ.ಸಿ. ರೋಡ್ ಬಳಿ ಪತ್ತೆಯಾಗಿದ್ದು, ಈ 13 ವರ್ಷದ ಬಾಲಕನ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮೃತನನ್ನು ಆಕೀಫ್ (13) ಎಂದು ಗುರುತಿಸಲಾಗಿದೆ.
ಬಾಲಕನ ದೇಹವು ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದು ತಲೆಗೆ ಕಲ್ಲಿನಿಂದ ಒಡೆದು ಹತ್ಯೆಗೈಯಲಾಗಿದೆ.
ಏಪ್ರಿಲ್ 3 ರ ಶನಿವಾರ ಸಂಜೆಯಿಂದ ಹಕೀಬ್ ನಾಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತಂಕಕ್ಕೊಳಗಾದ ಅವರ ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಕೀಬ್ ಕಾಣಿಯಾದ ಬಗ್ಗೆ ದೂರು ದಾಖಲಿಸಿದ್ದರು.
ಪಬ್ಜಿ ಆಟದ ಬಗ್ಗೆ ಆತ ತನ್ನ ಸ್ನೇಹಿತರೊಂದಿಗೆ ಜಗಳವಾಡಿದ್ದ ಎಂದು ಶಂಕಿಸಲಾಗಿದೆ. ಕಳೆದ ವರ್ಷ ಈ ಆಟವನ್ನು ಕೇಂದ್ರ ಸರ್ಕಾರವು ನಿಷೇಧಿಸಿತ್ತು, ಆದಾಗ್ಯೂ, ಮೂಲಗಳ ಪ್ರಕಾರ, ಕೆಲವು ಲೋಪದೋಷಗಳಿಂದಾಗಿ ಈಗಲೂ ಕೂಡಾ ಈ ಆಟ ಆಡಬಹುದಾಗಿದೆ.
ಸ್ಥಳಕ್ಕೆ ಧಾವಿಸಿದ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಓರ್ವ ಅಪ್ರಾಪ್ತ ವಯಸ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿ ಕುಮಾರ್, ಮಕ್ಕಳಿಗೆ ಮೊಬೈಲ್ ಫೋನ್ ಹಸ್ತಾಂತರಿಸುವಾಗ ಪೋಷಕರು ಬಹಳ ಜಾಗರೂಕರಾಗಿರಬೇಕು. ನಿಷೇಧಿತ ಆಟವಾದ ಪಬ್ಜಿ ಈಗಲೂ ಆಟವಾಡಲಾಗುತ್ತಿದೆ ಎಂದು ಹೇಳಿದ್ದು ಬ್ಲೂ ವೇಲ್ ಆಟದಿಂದ ಓರ್ವ ವಿದ್ಯಾರ್ಥಿಯು ತನ್ನನ್ನು ತಾನೇ ಹತ್ಯೆಗೈದ ಬಗ್ಗೆ ನೆನಪಿಸಿಕೊಂಡಿದ್ದಾರೆ.