ಮಂಗಳೂರು, ಎ.03 (DaijiworldNews/MB) : ತುಳುನಾಡಿನ ಆರಾಧ್ಯ ದೈವ, ಕಾರಣಿಕ ಪುರುಷನೆಂದೇ ಪ್ರಸಿದ್ಧವಾಗಿರುವ ಕೊರಗಜ್ಜನ ಕೆಲವು ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಘಟನೆಗಳು ಮಂಗಳೂರಿನಲ್ಲಿ ಸುದ್ದಿಯಾಗಿದೆ. ಆದರೆ ಏತನ್ಮಧ್ಯೆ ಮೂಲ್ಕಿಯ ಬಳ್ಕುಂಜೆ ಗ್ರಾಮದ ಕವತ್ತಾರು ಎಂಬಲ್ಲಿ ಸುಮಾರು 19 ವರ್ಷಗಳಿಂದ 65ರ ಹರೆಯದ ಪಿ. ಕಾಸಿಂ ಸಾಹೇಬ್ ಎಂಬವರು ಕೊರಗಜ್ಜ ಹಾಗೂ ಪರಿವಾರ ದೈವಗಳನ್ನು ಪಾತ್ರಿಯಾಗಿ ಪೂಜಿಸಿಕೊಂಡು ಬಂದಿರುವ ಘಟನೆಯೂ ಸುದ್ದಿ ಆಗಿದೆ.
ಪಿ. ಕಾಸಿಂ ಸಾಹೇಬ್ ಅವರು ಶ್ರೀಸ್ವಾಮಿ ಕೊರಗಜ್ಜ, ಕೊರತಿ, ಗುಳಿಗ ದೈವಸ್ಥಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳನ್ನು ನಿರ್ಮಿಸಿದ್ದು ಪ್ರತಿದಿನ ದೀಪ ಸೇವೆ, ಸಂಕ್ರಾಂತಿ ಮತ್ತಿತರ ಸಂದರ್ಭ ವಿಶೇಷ ಪೂಜೆಯನ್ನೂ ಮಾಡುತ್ತಿದ್ದಾರೆ. ತನ್ನ ಜೀವನವನ್ನೇ ದೇವ-ದೈವರ ಪೂಜೆ ಕಾಸಿಂ ಸಾಹೇಬ್ ಮುಡಿಪಾಗಿರಿಸಿದ್ದಾರೆ.
ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ಪಿ. ಕಾಸಿಂ ಸಾಹೇಬ್ ಅವರು 30 ನೇ ವಯಸ್ಸಿನಲ್ಲಿ ಮರಗಳನ್ನು ಸೀಳುವ ಕೆಲಸಕ್ಕೆಂದು ಕರ್ನಾಟಕದ ಸುಳ್ಯ, ಬಳ್ಕುಂಜೆಗೆ ಪ್ರಯಾಣಿಸಿದ್ದು ಬಳಿಕ ಕುಟುಂಬ ಸಹಿತ ಕವತ್ತಾರಿಗೆ ಬಂದು ನೆಲೆಸಿದ್ದಾರೆ. ಈ ಜಾಗದಲ್ಲಿ ನೆಲೆಸಿದ ಬಳಿಕ ಹಲವು ಸಮಸ್ಯೆಗಳು ಎದುರಾಗಿದ್ದು ಕೇರಳಕ್ಕೆ ಹೋಗಿ ಈ ಬಗ್ಗೆ ಕೇಳಿದಾಗ, ಆ ಜಾಗದಲ್ಲಿ ಸಮಸ್ಯತಿದೆ ಎಂದು ತಿಳಿದು ಬಂದಿದೆ.
ಇದು ಕೊರಗಜ್ಜನ ನೆಲೆ ಒಂದೋ ಕೊರಗಜ್ಜನನ್ನು ನಂಬಬೇಕು, ಇಲ್ಲವೇ ಜಾಗ ಖಾಲಿ ಮಾಡಬೇಕೆಂದು ದರ್ಶನ ಪಾತ್ರಿ ಹೇಳಿದ್ದು ಅಂದಿನಿಂದ ಕಾಸಿಂ ಅವರು ಕೊರಗಜ್ಜನನ್ನು ನಂಬಲು ಆರಂಭಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಾಸಿಂ ಸಾಹೇಬ್ ಅವರು, ನನ್ನ ಕುಟುಂಬಸ್ಥರು ಈ ದೈವ ಸೇವೆಗೆ ಸಹಕಾರ ನೀಡುತ್ತಿದ್ದಾರೆ. ಯಾರಿಗೂ ನಾನು ದೈವಗಳನ್ನು ನಂಬಲು ಹೇಳುತ್ತಿಲ್ಲ. ನನ್ನ ಪ್ರಕಾರ ದೇವರು ಒಬ್ಬನೇ ಆದರೆ ಇವರೆಲ್ಲರೂ ದೇವರ ದೂತರು ಎಂದು ಹೇಳಿದ್ದಾರೆ.
ಇನ್ನು ಮಕ್ಕಳು, ಮೊಮ್ಮಕ್ಕಳು ಮಸೀದಿ, ಮದ್ರಸಕ್ಕೆ ಹೋಗುತ್ತಾರೆ. ಆದರೆ ಈಗ ನಾನು ಕೊರಗಜ್ಜನನ್ನು ನಂಬಿದ ಬಳಿಕ ಜನರನ್ನು ನೋಡಿ ದರ್ಶನ ಬರುವ ಭಯದಿಂದ ಮಸೀದಿಗೆ ಹೋಗುತ್ತಿಲ್ಲ. ನನ್ನ ಬಳಿಕ ಈ ದೈವಗಳ ಸೇವೆಗೆ ಜನವಿಡಲು ವ್ಯವಸ್ಥೆ ಮಾಡಿಕೊಳ್ಳುತ್ತೇನೆ. ಜಾತಿ ಬಿಟ್ಟರೂ ನಮ್ಮ ದೈವ ಬಿಡಲಾರದು ಎಂದು ಹೇಳಿದ್ದಾರೆ.
ನಾನು ಯಾರಿಂದಲೂ ವಂತಿಗೆ ಹಣವನ್ನು ಪಡೆಯುತ್ತಿಲ್ಲ. ಕಾಣಿಕೆ ಮೊತ್ತದಿಂದ ಗುಡಿ ಜೀರ್ಣೋದ್ಧಾರ ಮಾಡಿದ್ದೇನೆ. ಈ ಹಿಂದೆ ಮರೆಯಲ್ಲಿಯೇ ಇದ್ದ ದೈವಗಳಿಗೆ ಈಗ ಗುಡಿ ಕಟ್ಟಿಸಿ ಪೂಜೆ ಮಾಡುತ್ತಿದ್ದೇನೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತೇನೆ ಎಂದಿದ್ದಾರೆ.
ಪ್ರಸ್ತುತ ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಇಲ್ಲಿ ಆರಾಧಿಸಲಾಗುತ್ತಿದೆ.2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಮಾಡಲಾಗುತ್ತದೆ. ಇಲ್ಲಿಗೆ ಜನರು ಯಾವುದೇ ಧರ್ಮ ಭೇದವಿಲ್ಲದೆ ಬರುತ್ತಾರೆ ಎಂದು ಹೇಳುತ್ತಾರೆ ಕಾಸಿಂ.