ಉಡುಪಿ, ಎ.03 (DaijiworldNews/PY): ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಮೊಬೈಲ್, ಸಿಸಿ ಟಿವಿ ಫೂಟೇಜ್ ಹಾರ್ಡ್ ಡಿಸ್ಕ್ಗಳನ್ನು, ಪೀಠೋಪಕರಣ, ಅಂಗಡಿಯ ನಾಮಫಲಕ, ಮತ್ತು ಅಲಂಕಾರಿಕ ವಿನ್ಯಾಸದ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದ್ದು, ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಆರೋಪಿಗಳನ್ನು ಉಡುಪಿ ಕಾಡಬೆಟ್ಟು ನಿವಾಸಿ ಕೆ. ವಿಶ್ವನಾಥರಾವ್ ಹಾಗೂ ಉಡುಪಿ ನಿವಾಸಿ ಕೆ ಜಯರಾಮ ಅಚಾರ್ಯ ಎಂದು ಗುರುತಿಸಲಾಗಿದೆ.
ಉಡುಪಿ ನಿವಾಸಿ ಇಸ್ಮಾಯಿಲ್ ಎಂಬವರು ಕೆ. ವಿಶ್ವನಾಥರಾವ್ ಇವರ ಮಾಲಿಕತ್ವದ ಬಾಡಿಗೆ ಅಂಗಡಿ ಕೋಣೆಯಲ್ಲಿ ನ್ಯೂ ಉಡುಪಿ ಮೊಬೈಲ್ ಎಂಬ ಹೆಸರಿನ ಮೊಬೈಲ್ ಅಂಗಡಿಯನ್ನು ಮಾಡಿಕೊಂಡು ಬೇರೆ ಬೇರೆ ಕಂಪನಿಯ ಮೊಬೈಲ್ ಮಾರಾಟ ಸರ್ವಿಸ್ ರಿಪೇರಿ ಇತ್ಯಾದಿಗಳನ್ನು ಮಾಡುತ್ತಿದ್ದರು. ಕೊರೊನಾ ಲಾಕ್ಡೌನ್ನ ಸಂದರ್ಭ ಇಸ್ಮಾಯಿಲ್ ಅವರ ಅಂಗಡಿಯನ್ನು ತೆರೆದಿರಲಿಲ್ಲ.
2020ರ ಮೇ 21ರಂದು ಬೆಳಗ್ಗೆ 11.00 ಗಂಟೆಗೆ ಅಂಗಡಿಯ ಹತ್ತಿರ ಹೋದಾಗ ಅಂಗಡಿ ಕೋಣೆ ತೆರೆದಿರುವುದು ಕಂಡು ಬಂದಿದೆ. ಕೆ ಜಯರಾಮ ಅಚಾರ್ಯ ಎನ್ನುವವವರು ಇಸ್ಮಾಯಿಲ್ ಅವರು ಕೆಲಸಗಾರರೊಂದಿಗೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅಲ್ಲಿ ಅಳವಡಿಸಿದ ಸಿಸಿಟಿವಿ, ಫ್ಯಾನ್ ಲೈಟ್ ಕಿತ್ತು ಹಾಕಿದ್ದಾರೆ. ಈ ವೇಳೆ ಇಸ್ಮಾಯಿಲ್ ಅವರು ಇದು ನನ್ನ ಸ್ವಾಧೀನದಲ್ಲಿದೆ ಎಂದು ಭಾವಚಿತ್ರವನ್ನು ತೆಗೆಯಲು ಪ್ರಾರಂಭಿಸಿದ್ದು, ಆ ಸಂದರ್ಭ ಕೆಲಸಗಾರರು ಅಲ್ಲಿಂದ ಓಡಿ ಹೋಗಿದ್ದಾರೆ. ಬಳಿಕ ಇಸ್ಮಾಯಿಲ್ ಅವರು ಅಂಗಡಿಗೆ ಹೊಸ ಬೀಗವನ್ನು ಅಳವಡಿಸಿ ಬಂದಿದ್ದರು.
2020ರ ಮೇ 25ರಂದು ಇಸ್ಮಾಯಿಲ್ ಅವರು ಅಂಗಡಿ ಬಳಿ ಹೋದಾಗ ಎಡಬದಿಯ ಪಕ್ಕದ ಅಂಗಡಿ ಕೋಣೆಯ ಮುಖಾಂತರ ಗೋಡೆಯನ್ನು ಕೊರೆದು ಅಂಗಡಿಯಲ್ಲಿದ್ದ ಬೇರೆ ಬೇರೆ ಕಂಪೆನಿಗೆ ಸೇರಿದ 55 ಹೊಸ ಮೊಬೈಲ್ ಗಳು ಹಾಗೂ ರಿಪೇರಿಗೆ ಬಂದ 127 ಮೊಬೈಲ್ಗಳು ಅಲ್ಲದೆ ಸಿಸಿ ಟಿವಿ ಫೂಟೇಜ್ ಹಾರ್ಡ್ ಡಿಸ್ಕ್ಗಳನ್ನು, ಪೀಠೋಪಕರಣ, ಅಂಗಡಿಯ ನಾಮಫಲಕ, ಮತ್ತು ಅಲಂಕಾರಿಕ ವಿನ್ಯಾಸದ ವಸ್ತುಗಳನ್ನು ಕದ್ದು ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಆರೋಪಿಗಳು ಸುಮಾರು 12,20,000 ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.