ಮಂಗಳೂರು, ಏ 2 (DaijiworldNews/MS):ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರಕಾರ ಈಗಾಗಲೇ ಆದೇಶಿಸಿರುವ ಪ್ರಕಾರ ಯುಗಾದಿ, ಗುಡ್ ಫ್ರೈಡೇ ಇತ್ಯಾದಿ ಹಬ್ಬಗಳ ಸಂದರ್ಭ ಸಾರ್ವಜನಿಕ ಸ್ಥಳ, ಮೈದಾನ, ಉದ್ಯಾನವನಗಳು, ಮಾರುಕಟ್ಟೆಗಳು, ಧಾರ್ಮಿಕ ಪ್ರದೇಶ ಗಳಲ್ಲಿ ಸಾರ್ವಜನಿಕ ಸಮಾರಂಭ, ಸಭೆಗಳನ್ನು ನಡೆಸದಂತೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಜಾತ್ರೆಗಳು, ಮೇಳಗಳಲ್ಲಿ ಸಾರ್ವಜನಿಕರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಮಾರ್ಗ ಸೂಚಿಗಳ ಉಲ್ಲಂಘನೆಯಾದಲ್ಲಿ ಮುನ್ಸಿಪಲ್ ಕಾರ್ಪೋರೇಷನ್ಗಳ ವ್ಯಾಪ್ತಿಯಲ್ಲಿ ರೂ. 250ನ್ನು ಇತರ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲಾಗುವುದು.
ಹವಾನಿಯಂತ್ರಿತವಲ್ಲದ ಪಾರ್ಟಿ ಹಾಲ್ಗಳು, ಡಿಪಾರ್ಟ್ಮೆಂಟಲ್ ಸ್ಟೋರ್ಗಳಲ್ಲಿ ರೂ. 5,000 ದಂಡ, ಹವಾನಿಯಂತ್ರಿತ ಪಾರ್ಟಿ ಹಾಲ್ಗಳು, ಡಿಪಾರ್ಟ್ಮೆಂಟಲ್ ಸ್ಟೋರ್ಗಳಲ್ಲಿ, ಬ್ರಾಂಡೆಡ್ ಶಾಪ್ಗಳು, ಶಾಪಿಂಗ್ ಮಾಲ್ಗಳಲ್ಲಿ ರೂ. 10,000 ದಂಡ ವಿಧಿಸಲಾಗುವುದು.
ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆ ಮಿತಿ ಜಾರಿಗೊಳಿಸಲಾಗಿದೆ. ಮದುವೆ ಸಮಾರಂಭಗಳು-ತೆರೆದ ಸ್ಥಳಗಳಲ್ಲಿ 500 ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರು, ಜನ್ಮದಿನ ಹಾಗೂ ಇತರ ಆಚರಣೆಗಳು ತೆರೆದ ಸ್ಥಳಗಳಲ್ಲಿ 100 ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ 50 ಜನರು, ಮರಣ ಅಥವಾ ಅಂತ್ಯಕ್ರಿಯೆ ತೆರೆದ ಸ್ಥಳಗಳಲ್ಲಿ 100 ಜನರು ಹಾಗೂ ಮುಚ್ಚಿದ ಸ್ಥಳಗಳಲ್ಲಿ 50 ಜನರು, ಶವಸಂಸ್ಕಾರ ಅಥವಾ ಸಮಾಧಿ ಕ್ರಿಯೆಯಲ್ಲಿ 50 ಜನರು, ಇತರ ಆಚರಣೆ 100 ಜನರು, ಧಾರ್ಮಿಕ ಆಚರಣೆ ಹಾಗೂ ಕಾರ್ಯಗಳು ತೆರೆದ ಸ್ಥಳಗಳಲ್ಲಿ 500 ಜನರು, ರಾಜಕೀಯ ಸಮಾವೇಶಗಳು ಅಥವಾ ಕಾರ್ಯಗಳು ತೆರೆದ ಸ್ಥಳಗಳಲ್ಲಿ 500 ಜನರಿಗೆ ಸೀಮಿತಗೊಳಿಸಲಾಗಿದೆ.
ಸಮಾರಂಭ ಸ್ಥಳಗಳಲ್ಲಿ ಆವರಣಗಳ ಮಾಲಕರು, ಸಮಾರಂಭಗಳ ಯೋಜಕರು/ಸಂಘಟಕರು ಅಥವಾ ಅತಿಥೇಯರು ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಸ್ವತಃ ಜವಾಬ್ದಾರರಾಗಿರುತ್ತಾರೆ. ತಾರಾ ಶ್ರೇಣಿಯ ಹೊಟೇಲ್ಗಳು ಕನಿಷ್ಠ 500 ಜನರು ಸೇರುವ ಸಾಮರ್ಥ್ಯ ಹೊಂದಿರುವ ಮದುವೆ ಸಭಾಂಗಣ/ಛತ್ರಗಳು ಹಾಗೂ ಅಥವಾ ಇಂತಹ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಗಳ ಉಲ್ಲಂಘನೆಯಾದಲ್ಲಿ 10,000 ರೂ. ಹಾಗೂ ಸಾರ್ವಜನಿಕ ಸಮಾ ರಂಭಗಳ ಆಯೋಜಕರಿಗೆ 10,000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ದಂಡ ವಿಧಿಸಲು ಮುಖ್ಯ ಪೇದೆಯ ಶ್ರೇಣಿಗಿಂತ ಕೆಳಗಿನವರಲ್ಲದ ಪೊಲೀಸ್ ಸಿಬ್ಬಂದಿ, ಮುನ್ಸಿಪಲ್ ಕಾರ್ಪೋರೇಷನ್ಗಳ ಹೆಲ್ತ್ ಇನ್ಸ್ ಪೆಕ್ಟರ್ , ಮುನ್ಸಿಪಲ್ ಕಾರ್ಪೋರೇಷನ್ಗಳ ಬಿಲ್ ಕಲೆಕ್ಟರ್ ಗಳನ್ನು ಅಧಿಕೃತವಾಗಿ ನಿಯೋಜಿಸಲಾಗಿರುತ್ತದೆ.