ಬೆಳ್ತಂಗಡಿ, ಎ.01 (DaijiworldNews/MB) : ಪಿಕ್ ಅಪ್ ವಾಹನ ದುರಸ್ತಿ ಮಾಡಿಸಿ ಹಿಂತಿರುಗುತ್ತಿದ್ದ ಸಂದರ್ಭ ಇಬ್ಬರ ಮೇಲೆ ಗುಂಪೊಂದು ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಮತ್ತು ಪಾದರಕ್ಷೆಗಳಿಂದ ಹಲ್ಲೆ ನಡೆಸಿದ ಘಟನೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
ಬಂಧಿತರನ್ನು ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂದು ಗುರುತಿಸಲಾಗಿದೆ.
ಬುಧವಾರ ಮಾರ್ಚ್ 31ರಂದು ಸಂಜೆಯ ವೇಳೆ ಬೆಳ್ತಂಗಡಿ ಕುಪ್ಪೆಟ್ಟು ನಿವಾಸಿ ಅಬ್ದುಲ್ ರಹೀಮ್ ತಮ್ಮ ಪಿಕ್ ಅಪ್ ವಾಹನಕ್ಕೆ ದುರಸ್ತಿಗಾಗಿ ಮಹಮ್ಮದ್ ಮುಸ್ತಾಫ ಎಂಬವರೊಂದಿಗೆ ಬೆಳ್ತಂಗಡಿ ಚರ್ಚ್ ರೋಡ್ಗೆ ಹೋಗಿದ್ದು ಅಲ್ಲಿಂದ ಸವಣಾಲಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಊಟ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದರು.
ಸವಣಾಲಿನಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಾಗ ರಾತ್ರಿ ಸುಮಾರು 10.30-10.45 ವೇಳೆಗೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ಬೈಕ್ನಲ್ಲಿ ಇಬ್ಬರು ಬಂದು ವಾಹನ ನಿಲ್ಲಿಸಲು ಸೂಚಿಸಿದ್ದಾರೆ. ವಾಹನ ನಿಲ್ಲಿಸಿದಾಗ ಓಮ್ನಿ ಕಾರಿನಲ್ಲಿ ಬಂದ ಕೆಲವರು ಸೇರಿದಂತೆ ಒಂದು ಗುಂಪು ಅಬ್ದುಲ್ ರಹೀಮ್ ಮತ್ತು ಮಹಮ್ಮದ್ ಮುಸ್ತಾಫ ಅವರ ಮೇಲೆ ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಪಾದರಕ್ಷೆಗಳಿಂದ ಹಲ್ಲೆ ನಡೆಸಿ, ಪಿಕ್ ಅಪ್ ವಾಹನವನ್ನು ಜಖಂಗೊಳಿಸಿ, ಜೀವ ಬೆದರಿಕೆ ಹಾಕಿದ್ದಾರೆ.
ಹಲ್ಲೆಯಿಂದ ರಕ್ತಸಿಕ್ತರಾಗಿದ್ದ ಅಬ್ದುಲ್ ರಹೀಮ್ ಮತ್ತು ಮಹಮ್ಮದ್ ಮುಸ್ತಾಫರವರನ್ನು ಆ ದಾರಿಯಲ್ಲಿ ತೆರಳುತ್ತಿದ್ದ ಓರ್ವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಹಲ್ಲೆ ನಡೆಸಿದವರು ಸಾಬು, ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವವರು ಎಂದು ಗಾಯಾಳುಗಳು ಗುರುತಿಸಿದ್ದು ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.