ಬೆಳ್ಮಣ್, ಎ.01 (DaijiworldNews/MB) : ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1 ರಲ್ಲಿ ಬೆಳ್ಮಣ್ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ ಟೋಲ್ ಗೇಟ್ (ಸುಂಕ ವಸೂಲಾತಿ) ಕೇಂದ್ರ ನಿರ್ಮಾಣಕ್ಕೆ ಭಾರೀ ವಿರೋಧಗಳು ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದೆ ಸರಿದಿದ್ದ ಟೋಲ್ ಗೇಟ್ ವಿಚಾರ ಇದೀಗ ಮತ್ತೆ ಸದ್ದು ಮಾಡುತ್ತಿದೆ.
ಯನ್.ಸುಹಾಸ್ ಹೆಗ್ಡೆ
ಸರ್ವಜ್ಞ ತಂತ್ರಿ
ಬೆಳ್ಮಣ್ನಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಸರ್ವೆಯನ್ನು ನಡೆಸಲು ಸಾಕಷ್ಟು ಬಾರೀ ಪ್ರಯತ್ನವನ್ನು ಪಟ್ಟರು ವಿಫಲವಾದ ಗುತ್ತಿಗೆ ವಹಿಸಿಕೊಂಡ ಸಂಸ್ಥೆಗಳು ಈ ಬಾರಿ ಬೆಳ್ಮಣ್ ಭಾಗವನ್ನು ಬಿಟ್ಟು ಪಡುಬಿದ್ರೆ ಸಮೀಪದ ಕಂಚಿನಡ್ಕದಲ್ಲಿ ರಸ್ತೆ ಬದಿಯಲ್ಲಿ ಕುಳಿತು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಡೆಸುವ ವಾಹನಗಳ ಲೆಕ್ಕಾಚಾರವನ್ನು ಮಾಡುತ್ತಿದೆ. ಬುಧವಾರದಿಂದ ಆರಂಭಗೊಂಡ ಈ ಸರ್ವೆ ಕಾರ್ಯ ಏಳು ದಿನಗಳ ಕಾಲ ನಡೆಯಲಿದ್ದು ಈ ಭಾಗ ರಸ್ತೆಯಲ್ಲಿ ಸಂಚಾರ ನಡೆಸುವ ಘನ ಹಾಗೂ ಸಣ್ಣ ಪುಟ್ಟ ವಾಹನಗಳ ಲೆಕ್ಕಾಚಾರವನ್ನು ಮಾಡಲಿದೆ. ಈ ಬಾರಿ ಮುಂಬೈ ಮೂಲದ ಸಾಹುಕಾರ್ ಗ್ಲೋಬಲ್ ಎನ್ನುವ ಸಂಸ್ಥೆ ಸರ್ವೆ ಕಾರ್ಯದ ಗುತ್ತಿಗೆಯನ್ನು ವಹಿಸಿಕೊಂಡಿದ್ದು ಏಳು ಮಂದಿ ಸಿಬ್ಬಂದಿಯ ಮೂಲಕ ಸರ್ವೆ ಕಾರ್ಯವನ್ನು ನಡೆಸುತ್ತಿದೆ.
ಈ ಮೊದಲು ವಾಹನ ಸವಾರರಿಂದ ಸುಂಕವನ್ನು ಪಡೆಯುತ್ತೇವೆ ಎಂದು ಗುತ್ತಿಗೆ ಪಡೆದುಕೊಂಡ ಮೈಸೂರಿನ ಮಿತ್ರಾ ಇನ್ಪೋ ಸೊಲ್ಯೂಷನ್ ಸಂಸ್ಥೆ ಪ್ರಾಯಶಃ ಹಿಂದೆ ಸರಿದಿದ್ದು ಆ ಬಳಿಕ ಮತ್ತೊಂದು ಖಾಸಗಿ ಸಂಸ್ಥೆ ಕುಂದಾಪುರ ಮೂಲದ ಎಜೇನ್ಸಿ ಮೂಲಕ ಸರ್ವೆ ಕಾರ್ಯವನ್ನು ನಡೆಸಿತ್ತು. ಮತ್ತೆ ಹೋಟೆಲ್ವೊಂದರಲ್ಲಿ ಕುಳಿತು ಸರ್ವೆ ಕಾರ್ಯವನ್ನು ಇನ್ನೊಂದು ಸಂಸ್ಥೆ ನಡೆಸಿತ್ತು. ಇದೀಗ ಮತ್ತೆ ಇನ್ನೊಂದು ಸಂಸ್ಥೆ ಗುಟ್ಟಾಗಿ ಬೆಳ್ಮಣ್ ಭಾಗವನ್ನು ಬಿಟ್ಟು ಪಡುಬಿದ್ರೆ ಸಮೀಪದ ಕಂಚಿನಡ್ಕನಲ್ಲಿ ಕುಳಿತು ಸರ್ವೆ ಕಾರ್ಯವನ್ನು ಮಾಡಲು ಮುಂದಾಗಿದೆ.
ಹೋರಾಟಕ್ಕೆ ಹೆದರಿ ಕಂಚಿನಡ್ಕದಲ್ಲಿ ಸರ್ವೆ: ಬೆಳ್ಮಣ್ ಪರಿಸರದಲ್ಲಿ ಈಗಾಗಲೇ ಹಲವು ಬಾರಿ ಸರ್ವೆ ಕಾರ್ಯಕ್ಕೆ ಮುಂದಾಗಿದ್ದು ಇಲ್ಲಿನ ಹೋರಾಟದಿಂದ ಸರ್ವೆ ಕಾರ್ಯಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಈ ಬಾರಿ ಬೆಳ್ಮಣ್ ಜನತೆಯ ಕಣ್ಣು ತಪ್ಪಿಸಿ ಕಂಚಿನಡ್ಕದಲ್ಲಿ ಸರ್ವೆ ಕಾರ್ಯಕ್ಕೆ ಮುಂಬಯಿ ಮೂಲದ ಸಾಹುಕಾರ್ ಗ್ಲೋಬಲ್ ಸಂಸ್ಥೆ ಮುಂದಾಗಿದೆ.
ಟೋಲ್ ನಿರ್ಮಾಣ ಎಲ್ಲಿ: ಬೆಳ್ಮಣ್ನಲ್ಲಿ ವಿರೋಧಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಂಚಿನಡ್ಕದಲ್ಲಿ ಟೋಲ್ ಗೇಟ್ ನಿರ್ಮಾಣಗೊಳ್ಳುತ್ತದೆ ಎನ್ನುವ ಗಾಳಿ ಸುದ್ದಿಗಳು ಹರಿಯುತ್ತಿದ್ದರೂ ಇನ್ನೂ ಸ್ಪಷ್ಟವಾದ ಜಾಗ ಎಲ್ಲಿ ಎಂದು ಬಹಿರಂಗಗೊಂಡಿಲ್ಲ. ಸರ್ವೆ ನಡೆಸುವ ಸಿಬ್ಬಂದಿ ಹೇಳುವ ಪ್ರಕಾರ ಈಗಾಗಲೇ ಮೂರು ಕಡೆಗಳಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಸ್ಥಳನ್ನು ಗುರುತಿಸಲಾಗಿದೆ ಬೆಳ್ಮಣ್ ಹಾಗೂ ನಿಟ್ಟೆ ಸಮೀಪದ ಹಾಳೆಕಟ್ಟೆ ಹಾಗೂ ಪಡುಬಿದ್ರೆ ಸಮೀಪದ ಕಂಚಿನಡ್ಕ ಈ ಮೂರು ಸ್ಥಳಗಳನ್ನು ಟೋಲ್ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ ಎನ್ನಲಾಗಿದೆ.
ಎಚ್ಚರಿಕೆ ನೀಡಿದ ಗ್ರಾಮಸ್ಥರು: ಎಲ್ಲೇ ಕುಳಿತು ಸರ್ವೆಯನ್ನು ನಡೆಸಿದರೂ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಗೆ ಟೋಲ್ ನಿರ್ಮಾಣಕ್ಕೆ ಅವಕಾಶವನ್ನು ನೀಡುವುದಿಲ್ಲ. ಪದೇ ಪದೇ ಸರ್ವೆಯನ್ನು ನಡೆಸುವ ಮೂಲಕ ಈ ಭಾಗದ ಜನತೆಯನ್ನು ನೆಮ್ಮದಿಯನ್ನು ಸರ್ಕಾರ ಕಸಿಯುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಈ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ. ಟೋಲ್ ನಿರ್ಮಾಣಕ್ಕೆ ಎಂದಿಗೂ ಆಸ್ಪದವನ್ನು ನೀಡುವುದಿಲ್ಲ ಎಂದು ಬೆಳ್ಮಣ್ ಭಾಗದ ಜನ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶವನ್ನು ನೀಡುವುದಿಲ್ಲ. ಟೋಲ್ ನಿರ್ಮಾಣದ ವಿರುದ್ದ ಸದಾ ಹೋರಾಟಕ್ಕೆ ಸಿದ್ದರಿದ್ದೇವೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಯನ್.ಸುಹಾಸ್ ಹೆಗ್ಡೆ ಹೇಳಿದ್ದಾರೆ.
ಟೋಲ್ ಗೇಟ್ ನಿರ್ಮಾಣಗೊಳ್ಳುವುದರಿಂದ ಬಡಪಾಯಿ ಜನರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಯಾವುದೇ ಕಾರಣಕ್ಕೆ ಈ ಭಾಗದ ರಸ್ತೆಯಲ್ಲಿ ಟೋಲ್ ನಿರ್ಮಾಣವಾಗುವುದಕ್ಕೆ ಬಿಡುವುದಿಲ್ಲ. ಈ ಭಾಗದ ಜನತೆಯ ಸಂಪೂರ್ಣ ವಿರೋಧವಿದೆ ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಸರ್ವಜ್ಞ ತಂತ್ರಿ ಹೇಳಿದ್ದಾರೆ.