ಕುಂದಾಪುರ, ಏ.01 (DaijiworldNews/HR): ಬೈಂದೂರು ತಾಲೂಕಿನ ಯುವತಿಯೂರ್ವಳು ಭಾರತೀಯ ಗಡಿ ಭದ್ರತಾ ಪಡೆಗೆ ಸೇರಲು ಸಿದ್ಧಳಾಗಿ ನಿಂತಿದ್ದು, ಇಂದಿನಿಂದ ಮಧ್ಯಪ್ರದೇಶದ ಗ್ವಾಲಿಯರ್ನ ತೇಕನ್ಪುರ್ನಲ್ಲಿ ನಡೆಯಲಿರುವ ತರಬೇತಿಗೆ ಹಾಜರಾಗಲಿದ್ದಾರೆ.
ಭಾರತೀಯ ಸೇನೆಯ ಗಡಿಭದ್ರತಾ ಪಡೆ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಗೆ ಆಯ್ಕೆಯಾಗಿರುವ ಬೈಂದೂರು ತಾಲೂಕಿನ ಏಳಜಿತ್ ಗ್ರಾಮದ ಹುಣ್ಸೆಮಕ್ಕಿ ನಿವಾಸಿಯಾದ ವಿದ್ಯಾ ಗೌಡ ಏಪ್ರಿಲ್ 1ರಿಂದ ತರಬೇತಿಗೆ ಹಾಜರಾಗಲಿದ್ದಾರೆ.
ಬೈಂದೂರು ತಾಲೂಕಿನ ಏಳಜಿತದ ಗ್ರಾಮದ ಹುಣ್ಸೆಮಕ್ಕಿ ರಮೇಶ್ ಗೌಡ ಹಾಗೂ ಪಾರ್ವತಿ ದಂಪತಿಗಳ ಪುತ್ರಿ ವಿದ್ಯಾ ಹೆಚ್. ಗೌಡ ಹೈಸ್ಕೂಲು ಹಾಗೂ ಕಾಲೇಜು ದಿನಗಳಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದು, ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಚಾಂಪಿಯನ್ ಆಗಿಯೂ ಗುರುತಿಸಿಕೊಂಡಿದ್ದರು.
ಇನ್ನು ವಿದ್ಯಾ ಹೆಚ್. ಗೌಡ ತನ್ನ ಪ್ರಾಥಮಿಕ ಶಿಕ್ಷಣವನ್ನು ಏಳಜಿತ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ಕುಂದಾಪುರ ಜ್ಯೂನಿಯರ್ ಕಾಲೇಜು, ಬಿಎಸ್ಸಿ ಪದವಿಯನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬಿ.ಎಡ್ ಪದವಿಯನ್ನು ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ.