ಮೂಡುಬಿದಿರೆ, ಮಾ 31 (DaijiworldNews/MS): ಎರಡು ಕಾರುಗಳಲ್ಲಿ ಬಂದ ಡಕಾಯಿತರ ತಂಡವು ಮೂಡುಬಿದಿರೆ, ಗುರುಪುರ, ಬಜ್ಪೆಯಲ್ಲಿ ಮನೆ ಹಾಗೂ ವಾಹನ ಸವಾರರನ್ನು ಸರಣಿ ದರೋಡೆ ನಡೆಸಿರುವ ಘಟನೆ ಮಾ.31ರ ಬೆಳ್ಳಂಬೆಳಗ್ಗೆ ನಡೆದಿದ್ದು ಇದು ಕರಾವಳಿಗರನ್ನು ಬೆಚ್ಚಿ ಬೀಳಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮೂಡುಬಿದಿರೆ ಬಳಿ ಎರಡು ಮನೆಗಳ ಮೇಲೆ ಡಕಾಯಿತ ತಂಡವೊಂದು ದಾಳಿ ನಡೆಸಿದ್ದು, ಅಲ್ಲೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿಗೈದಿದೆ. ಒಂದು ದ್ವಿಚಕ್ರವಾಹನವನ್ನು ದರೋಡೆ ಮಾಡಿದೆ.
ತೋಡಾರಿನ ಅರುಣ್ ಎಂಬವರ ಮನೆಗೆ ಕಲ್ಲು ಎಸೆದ ಡಕಾಯಿತರ ಗುಂಪು ಅಂಗಳದಲ್ಲಿದ್ದ ಕಾರಿನ ಹಿಂಬದಿಯ ಗ್ಲಾಸಿಗೆ ಹಾನಿ ಮಾಡಿದ್ದಾರೆ ಮತ್ತು ಗಾಂಧಿನಗರದ ಹರೀಶ್ಚಂದ್ರ ನಾಯ್ಕ್ ಎಂಬವರ ಮನೆಗೆ ಕಲ್ಲು ಎಸೆದು ಮತ್ತು ಬಾಗಿಲಿಗೆ ಕಾಲಿನಿಂದ ಒದ್ದಿದ್ದಾರೆ. ಅಂಗಳದಲ್ಲಿದ್ದ ಓಮ್ನಿ ಕಾರಿನ ಗ್ಲಾಸನ್ನು ಪುಡಿ ಮಾಡಿ ಒಳಗಡೆ ಇದ್ದ ನಾಲ್ಕು ಸಾವಿರ ಹಣವನ್ನು ದೋಚಿದ್ದಾರೆ. ಎರಡೂ ಕಡೆಯಲ್ಲೂ ಕಲ್ಲು ಹೊಡೆದ ಶಬ್ದಕ್ಕೆ ಮನೆಯವರು ಎದ್ದು ಬೊಬ್ಬೆ ಹಾಕಿದಾಗ ಕಳ್ಳರು ವಾಹನದಲ್ಲಿ ಪರಾರಿಯಾಗಿದ್ದಾರೆ.
ಇದಲ್ಲದೆ ಬಜಪೆ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಗುರುಪುರ ಆಣೆ ಬಳಿಯ ಬಸ್ ನಿಲ್ದಾಣದ ಸಮೀಪ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ಕಾರಿನಲ್ಲಿ ಮೂಡುಬಿದಿರೆಗೆ ತೆರಳುತ್ತಿದ್ದ ವ್ಯಕ್ತಿಗಳನ್ನು ಇನ್ನೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅಡ್ಡಹಾಕಿ ದರೋಡೆ ನಡೆಸಿದ್ದಾರೆ. ಈ ವೇಳೆ ಹಣ ಹಾಗೂ ಮೊಬೈಲ್ ನ್ನು ದೋಚಿದ್ದಾರೆ ಬೆಳ್ಳಂಬೆಳಗ್ಗೆ ನಡೆದ ಘಟನೆಯಾದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಿತ್ತು. ದರೋಡೆ ತಂಡಕ್ಕೆ ಪ್ರಯಾಣಿಕರ ಬಳಿ ಹೆಚ್ಚಿನ ಹಣ ಇಲ್ಲದಿರುವುದರಿಂದ ಕೆರಳಿ ಅವರ ವಾಹನದ ಗ್ಲಾಸ್ ಪುಡಿಗೈದಿದೆ.
ಈ ಎಲ್ಲಾ ಘಟನೆ ಮಾ.31 ರ ನಸುಕಿನ ಜಾವ 2 ಗಂಟೆಯಿಂದ 5 ಗಂಟೆಯ ಒಳಗೆ ನಡೆದಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್, ಉಪ ನಿರೀಕ್ಷಕ ಸುದೀಪ್, ಅಪರಾಧ ತಡೆ ವಿಭಾಗದ ಪೊಲೀಸರು ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ.