ಉಡುಪಿ, ಮಾ.31 (DaijiworldNews/MB) : ರಾಜ್ಯದ ವಿಖ್ಯಾತ ಉಡುಪಿ ಶ್ರೀಕೃಷ್ಣ ಮಠದ ಕನ್ನಡ ನಾಮಫಲಕ ತೆರವು ಮಾಡಿ ತುಳು ಹಾಗೂ ಸಂಸ್ಕೃತದಲ್ಲಿ ನಾಮ ಫಲಕ ಅಳವಡಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು, ''ನಾನು ತುಳು ವಿರೋಧಿ ಅಲ್ಲ, ತುಳು ನಮ್ಮ ಸೋದರ ಭಾಷೆ, ಅದರ ಬಗ್ಗೆ ಗೌರವ ಪ್ರೀತಿ ಇದೆ'' ಎಂದು ಹೇಳಿದ್ದಾರೆ.
ಕೃಷ್ಣಮಠದ ಮುಂಭಾಗ ಇದ್ದ ಕೃಷ್ಣ ಮಠ ಎಂಬ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿದ್ದ ನಾಮಫಲಕವನ್ನ ತೆರವು ಮಾಡಿದ್ದ ಕೃಷ್ಣಮಠದ ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ, ಬಳಿಕ ತುಳು ಹಾಗೂ ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂಬ ಬರಹವನ್ನು ಮರದಲ್ಲಿ ಕೆತ್ತನೆ ಮಾಡಿ ಮಠದ ಮುಂಭಾಗ ಅಳವಡಿಸಿದೆ. ಈ ವಿಚಾರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನೀಲಾವರ ಸುರೇಂದ್ರ ಅಡಿಗರು, ''ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಕನ್ನಡಿಗರು ಕ್ಷಮಿಸಲಾರದಂತಹ ಅಪರಾಧ ಮಾಡಿದ್ದಾರೆ'' ಎಂದು ಹೇಳಿದ್ದರು. ಸುರೇಂದ್ರ ಅಡಿಗರ ಈ ಹೇಳಿಕೆಗೆ ತುಳು ನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಬೆನ್ನಲ್ಲೇ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ನೀಲಾವರ ಸುರೇಂದ್ರ ಅಡಿಗ ಅವರು, ''ನಾನು ತುಳು ವಿರೋಧಿ ಅಲ್ಲ, ತುಳು ನಮ್ಮ ಸೋದರ ಭಾಷೆ, ಅದರ ಬಗ್ಗೆ ಗೌರವ ಪ್ರೀತಿ ಇದೆ. ಒಂದು ಬೋರ್ಡ್ನಲ್ಲಿ 60% ಕನ್ನಡದಲ್ಲಿ ಇರಬೇಕು. ಅದರ ನಂತರ ಉಳಿದ ಭಾಷೆ ಇರಬೇಕು'' ಎಂದು ಹೇಳಿದ್ದಾರೆ.
''ತುಳು ಲಿಪಿ ಹಾಕಿದ್ದಕ್ಕೆ ಸಂತೋಷ ಇದೆ. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಕೂಡಾ ನಮ್ಮ ಕನ್ನಡ ಸಾಹಿತ್ಯ ಪರಿಷತ್ನ ಬೆಂಬಲ ಇದೆ. ಆದರೆ ಯಾವುದೇ ನಾಮಫಲಕ ಆದರೂ ಸರಿ ಮೊದಲು ಕನ್ನಡ ಇರಬೇಕು. ಮಸೀದಿ, ಚರ್ಚ್, ಮಠ ಎಲ್ಲಾದರೂ ಸರಿ ಅದರ ನಾಮ ಫಲಕದಲ್ಲಿ ಮೊದಲು ಕನ್ನಡ ಇರಬೇಕು'' ಎಂದು ಹೇಳಿದರು.
''ಇನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂಬುದು ಹುದ್ದೆ ಅಲ್ಲ ಇದೊಂದು ಸೇವೆ. ನಾನೊಬ್ಬ ಪಕ್ಕಾ ಸಾಹಿತಿಯಾಗಿದ್ದೇನೆ. ಬಲ ಪಂಥವೂ ಅಲ್ಲ ಎಡ ಪಂಥವೂ ಅಲ್ಲ. ಪಲ್ಲಕ್ಕಿ ಹೊರುವವರು ಪಲ್ಲಕ್ಕಿ ಮೇಲೆ ಕೂತುಕೊಳ್ಳಬೇಕು ಎಂಬ ತತ್ವ ನನ್ನದು'' ಎಂದು ಹೇಳಿದ್ದಾರೆ.