ಕಾಸರಗೋಡು, ಮಾ.30 (DaijiworldNews/HR): ರಾಜ್ಯದಲ್ಲಿ ಮತ್ತೆ ಎಲ್ಡಿಎಫ್ಗೆ ಆಡಳಿತ ಖಚಿತವಾಗಿದ್ದು 2016ಕ್ಕಿಂತ ಈ ಬಾರಿ ಅತೀ ಹೆಚ್ಚು ಸ್ಥಾನ ಪಡೆದು ಅಧಿಕಾರ ಪಡೆಯಲಿದೆ ಎಂದು ಕೇರಳ ಸಿ.ಎಂ ಪಿಣರಾಯಿ ವಿಜಯನ್ ಹೇಳಿದ್ಡಾರೆ.
ಕಾಸರಗೋಡು ಸಿಟಿ ಟವರ್ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಳೆದ ಐದು ವರ್ಷಗಳಲ್ಲಿ ಜಾರಿಗೆ ತಂದ ಜನಪರ ಯೋಜನೆ ಹಾಗೂ ಅಭಿವೃದ್ದಿ ಯೋಜನೆಗಳು ಜನರಿಂದ ಮೆಚ್ಚುಗೆ ಪಡೆದಿವೆ. ಪ್ರವಾಹ ಸೇರಿದಂತೆ, ಪ್ರಕೃತಿ ವಿಕೋಪ, ಕೋವಿಡ್ ಮಹಾಮಾರಿಯ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ದಾಖಲೆಯ ಅಭಿವೃದ್ಧಿಯನ್ನು ಕೇರಳ ಕಂಡಿದೆ" ಎಂದರು.
"ಪ್ರತಿಪಕ್ಷಗಳು ವಿವಾದ ಸೃಷ್ಟಿಸಿ ಜನರನನ್ನು ತಪ್ಪುದಾರಿಗೆಳೆಯುತ್ತಿದೆ. ಅಭಿವೃದ್ಧಿ ಬಗ್ಗೆ ಚರ್ಚಿಸಲು ಇವರಿಗೆ ಸಮಯ ಇಲ್ಲ" ಎಂದು ಆರೋಪಿಸಿದ್ದಾರೆ.
"5 ವರ್ಷಗಳ ಹಿಂದಿನ ಕೇರಳ ಹಾಗೂ ಈಗಿನ ಕೇರಳವನ್ನು ಹೋಲಿಕೆ ಮಾಡಬೇಕು. ಆಸ್ಪತ್ರೆಗಳು, ಶಾಲೆ, ರಸ್ತೆಗಳು ಗುಣಮಟ್ಟಕ್ಕೇರಿಸಲಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಪಡಿತರ ವ್ಯವಸ್ಥೆ ಬಲಪಡಿಸಲಾಗಿದೆ. ಮಾಸಿಕ ಪಿಂಚಣಿಯನ್ನು ಏರಿಕೆ ಮಾಡಲಾಗಿದೆ. ಜನಪರ ಯೋಜನೆ ಜಾರಿಗೆ ತರುವ ಮೂಲಕ ಎಲ್ಲರ ಮೆಚ್ಚುಗೆಗೆ ಎಲ್ಡಿಎಫ್ ಸರಕಾರ ಮುಂದೆ ಬಂದಿದೆ" ಎಂದಿದ್ದಾರೆ.
"ಕೇಂದ್ರ ಸರಕಾರ ಜನರನ್ನು ವಿಂಗಡಿಸಲು ಪ್ರಯತ್ನಿಸುತ್ತಿದೆ ಮತ್ತು ಅದು ಆರೆಸ್ಸೆಸ್ ಅಜೆಂಡವನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಕೇರಳದಲ್ಲಿ ಜಾರಿಗೆ ತರಲು ಬಿಡುವುದಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನಿರ್ಭಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ" ಎಂದರು
ಇನ್ನು ಉತ್ತರಪ್ರದೇಶದಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ರೈಲಿನಲ್ಲಿ ನಡೆದ ಹಲ್ಲೆಯನ್ನು ಸಮರ್ಥಿಸುತ್ತಿರುವ ಕೇಂದ್ರ ಸಚಿವ ಪಿಯೂಸ್ ಗೋಯಲ್ರವರ ಕ್ರಮವನ್ನು ಖಂಡಿಸಿದ ಮುಖ್ಯಮಂತ್ರಿ, "ಹಲ್ಲೆ ನಡೆಸಿರುವುದು ಕೇವಲ ಆರೋಪ ಮಾತ್ರವಾಗಿದೆ. ದಾಖಲೆ ಪರಿಶೀಲಿಸಿ ಸನ್ಯಾಸಿನಿಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿದ್ದು, ಸಂಘ ಪರಿವಾರದ ಅಜೆಂಡಾವನ್ನು ಜಾರಿಗೆ ತರುವ ಬಿಜೆಪಿಯ ಹುನ್ನಾರವಾಗಿದೆ. ಪ್ರಕರಣವನ್ನು ಮುಚ್ಚಿ ಹಾಕಲು, ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು ರಕ್ಷಿಸುವ ಯತ್ನ ಬಿಜೆಪಿಯಿಂದ ನಡೆಯುತ್ತಿದೆ" ಎಂದು ಆರೋಪಿಸಿದರು.
"ಕೇರಳದಲ್ಲಿ ಕೇವಲ ಒಂದೇ ಒಂದು ಸ್ಥಾನದಲ್ಲಿ ಬಿಜೆಪಿ ಖಾತೆ ತೆರೆದಿದ್ದು, ನೇಮಂ ನಲ್ಲಿ 2016ರಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಈ ಖಾತೆಯನ್ನು ಮುಚ್ಚುತ್ತೇವೆ. ಕೇರಳದಲ್ಲಿ ಕಾಂಗ್ರೆಸ್ನ ಒಳಒಪ್ಪಂದದಿಂದ ಬಿಜೆಪಿ ಗೆದ್ದಿತ್ತು. ಈ ಬಾರಿ ಅದನ್ನು ಕ್ಲೋಸ್ ಮಾಡುತ್ತೇವೆ" ಎಂದರು.
ಬಳಿಕ ಪಿಣರಾಯಿ ವಿಜಯನ್ರವರು ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಿದರು, ಮೊಗ್ರಾಲ್ ಶಾಲಾ ಮೈದಾನದಲ್ಲಿ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ವಿ. ವಿ ರಮೇಶನ್, ಕಾಸರಗೋಡು ಕ್ಷೇತ್ರದ ಎಂ.ಎ ಲತೀಫ್ ಪರ ಪ್ರಚಾರ ನಡೆಸಿದರು.