ಮಂಗಳೂರು, ಮಾ.30 (DaijiworldNews/MB) : ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಸಾಕಷ್ಟು ನಷ್ಟ ಉಂಟಾಗಿದೆ. ಕೆಲವೆಡೆ ಮನೆಗೆ ಹಾನಿಯಾಗಿದ್ದರೆ ಇನ್ನು ಕೆಲವೆಡೆ ತಂತಿ ಕಂಬ ಬಿದ್ದು ಕಾರುಗಳಿಗೆ ಹಾನಿಯಾಗಿದೆ. ಏತನ್ಮಧ್ಯೆ ಮಂಗಳೂರಿನ ಹಳೆಯ ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟುಗಳ ಹಗ್ಗ ತುಂಡಾಗಿ ಹಲವಾರು ಬೋಟುಗಳ ಗಾಳಿಯ ವೇಗಕ್ಕೆ ಪಣಂಬೂರು ಮೀನಕಳಿ, ಚಿತ್ರಪುರ, ಸುರತ್ಕಲ್, ಸಸಿಹಿತ್ಲು ಸಮುದ್ರ ಕಿನಾರೆಗೆ ಬಂದು ನಿಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ, ಉಡುಪಿ ಜಿಲ್ಲೆಯ ಕೆಲವೆಡೆ ಸೋಮವಾರ ಅಪರಾಹ್ನ ಮತ್ತು ರಾತ್ರಿ ಗುಡುಗು ಸಹಿತ ತೀವ್ರ ಮಳೆ ಸುರಿದಿದೆ. ಈ ಗಾಳಿಯ ರಭಸಕ್ಕೆ ಹಗ್ಗ ತುಂಡಾಗಿ ಹಳೆಯ ಧಕ್ಕೆಯಿಂದ ಕಡಲ ಕಿನಾರೆಗೆ ಬಂದು ತಲುಪಿದ ಬೋಟುಗಳ ಪೈಕಿ ಹಲವು ಬೋಟುಗಳು ಹಾಳಾಗಿದೆ. ಇದರಿಂದಾಗಿ ಮೀನುಗಾರರು ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ.
ಕರಾವಳಿಯಲ್ಲಿ ಅಕಾಲಿಕವಾಗಿ ಸುರಿದ ಗುಡುಗು ಸಹಿತ ಗಾಳಿ ಮಳೆಯಿಂದಾಗಿ ನಗರದ ಕೃಷ್ಣನಗರದಲ್ಲಿ ಮಳೆಗೆ ಮನೆಯೊಂದಕ್ಕೆ ಹಾನಿ ಸಂಭವಿಸಿದೆ. ಬಾರಿ ಮಳೆಗೆ ನಗರದ ಮುಳಿಹಿತ್ಲು ಬಳಿ ತಂತಿ ಕಂಬ ಬಿದ್ದು ಎರಡು ಕಾರಿಗೆ ಹಾನಿಯಾಗಿದೆ. ಬಂಟ್ವಾಳದ ಬೆಂಜನಪದವಿನಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಕೆಲವೆಡೆ ಮರ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ.