ಮಂಗಳೂರು, ಮಾ 30 (DaijiworldNews/MS): ಕರಾವಳಿಯ ಇಬ್ಬರು ವನಿತೆಯರು, ದೇಶ ಸೇವೆಗೆ ಆಯ್ಕೆಯಾಗಿದ್ದು, ಇದೇ ಏಪ್ರಿಲ್ 1ರಿಂದ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದ್ದಾರೆ.
ಭಾರತೀಯ ಸೇನೆಯ ಗಡಿಭದ್ರತಾ ಪಡೆ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಗೆ ಆಯ್ಕೆಯಾಗಿರುವ ಪುತ್ತೂರು ತಾಲೂಕಿನ ಬಲ್ನಾಡಿನ ರಮ್ಯಾ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಇನ್ನೆರಡು ದಿನದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಪುತ್ತೂರು ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜಾವತಿ ದಂಪತಿಯ ಪುತ್ರಿಯಾಗಿರುವ ರಮ್ಯಾ ತನ್ನ ಶಾಲಾ ದಿನಗಳಿಲ್ಲಿಯೇ ಎನ್ಸಿಸಿ ತರಬೇತಿ ಪಡೆದಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿಯೇ ವೈದ್ಯಕೀಯ ಪರೀಕ್ಷೆಗೆ ನಡೆದಿತ್ತು. ಆದರೆ ಕೊರೊನಾ ಹಿನ್ನೆಲೆ ಫಲಿತಾಂಶ ತಡವಾಗಿ ಪ್ರಕಟವಾಗಿತ್ತು.
ಇನ್ನು ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮಲೆಕರ್ಚಿ ಮೇದಪ್ಪ ಗೌಡ ಮತ್ತು ದೇವಕಿಯವರ ಪುತ್ರಿ ಯೋಗಿತಾ ಎಂ. ಕೂಡ ಭಾರತೀಯ ಸೇನೆಯ ಗಡಿಭದ್ರತಾ ಪಡೆ ಗೆ ಆಯ್ಕೆಯಾಗಿದ್ದಾರೆ.
ಏಪ್ರಿಲ್ 1ರಂದು ಮಧ್ಯಪ್ರದೇಶದ ಗ್ವಾಲಿಯರ್ನ ತೇಕನ್ಪುರ್ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇವರು ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ಮೈಕ್ರೋಬಯಾಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.ಇಬ್ಬರೂ ಯುವತಿಯರು ದೇಶ ಸೇವೆಗೆ ಸಜ್ಜಾಗಿರುವುದು ಅವರ ಕುಟುಂಬಸ್ಥರಲ್ಲಿ ಹೆಮ್ಮೆ ಮೂಡಿಸಿದೆ. ಅಲ್ಲದೆ ಗ್ರಾಮದ ಜನತೆಯಿಂದ ಮೆಚ್ಚುಗೆ ಹಾಗೂ ಬೆಂಬಲ ವ್ಯಕ್ತವಾಗಿದೆ.