ಮೂಡುಬಿದಿರೆ , ಮಾ.29 (DaijiworldNews/PY): ಐವರು ಮಕ್ಕಳ ತಾಯಿ, ಒಂದು ಕಾಲದಲ್ಲಿ 6.25 ಎಕ್ರೆ ಜಮೀನಿನ ಒಡತಿಯಾಗಿದ್ದರೂ, ಇದೀಗ ಬಿಡಿಗಾಸಿಗೂ ಪರದಾಡುವ 85 ವೃದ್ಧೆ ತಾಯಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಹೌದು ಮೂಡುಬಿದಿರೆ ನಿಡ್ಡೋಡಿ ಕಲ್ಲಮುಂಡ್ಕೂರು ಗ್ರಾಮದ ಮೋಂತಿನ್ ಡಿಸಿಲ್ವ (85) ಹಾಗೂ ಪತಿ ದಿ. ಬ್ಯಾಪ್ಟಿಸ್ಟ್ ಡಿಸಿಲ್ವ ದುಡಿದು ಗಳಿಸಿದ ಹಣದಿಂದ ಖರೀದಿ ಮಾಡಿದ ಜಮೀನನ್ನು ಈಗ ಮಕ್ಕಳು ಮೋಸದಿಂದ ತಮ್ಮ ಪಾಲಿಗೆ ಮಾಡಿಕೊಂಡಿದ್ದು, ವೃದ್ದೆ ತಾಯಿಯನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ. ಇದೀಗ ತನ್ನ ಪಾಲಿನ ಜಮೀನು ತನಗೆ ಹಿಂತಿರುಗಿಸಿ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೆಟ್ಟಿಲೇರಿದ್ದಾರೆ.
ಈ ಕುರಿತು, ಮಾ.29 ರ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್, "ತಾಯಿಗೆ ಮಕ್ಕಳು ಮಾಸಾಶನ ಕೊಡಬೇಕು ಎಂಬ ಆದೇಶವಿದ್ದರೂ ಅದ್ಯಾವುದನ್ನೂ ಕೊಡದೇ ತಮ್ಮ ಪಾಲಿನ ಜಮೀನನ್ನು ಮಕ್ಕಳು ಅವರ ಪಾಲಿಗೆ ಮಾಡಿಕೊಂಡಿದ್ದಾರೆ. ತನಗೆ ಖರ್ಚಿಗೆ ಹಣ ಕೊಡದಿದ್ದರೂ ಪರವಾಗಿಲ್ಲ. ತನ್ನ ಪಾಲಿಗೆ ಬಂದ 2.25 ಎಕ್ರೆ ಜಮೀನು ತನಗೆ ವಾಪಾಸು ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ" ಎಂದಿದ್ದಾರೆ.
2006ರಲ್ಲಿ ಬ್ಯಾಪ್ಟಿಸ್ಟ್ ಡಿಸಿಲ್ವ ನಿಧನರಾಗಿದ್ದು, ಅವರು ಕುಟುಂಬಕ್ಕಾಗಿ 6.25 ಎಕ್ರೆ ಜಮೀನು ಹಾಗೂ ಮನೆಯನ್ನು ಬಿಟ್ಟು ಹೋಗಿದ್ದರು. ಕುಟುಂಬದ ಆಸ್ತಿಯಲ್ಲಿ ಪಾಲು ನೀಡಬೇಕೆಂದು ದಿನನಿತ್ಯವೂ ಕೇಳುತ್ತಿದ್ದ ಮಕ್ಕಳಿಗೆ ಪಾಲು ಆಸ್ತಿಯ ಪಾಲು ಸಿಕ್ಕಿದೆ. ಆದರೆ, ತಮ್ಮ ಪಾಲಿಗೆ ಬಂದ ಕುಟುಂಬದ ಜಮೀನು ಪಡೆದ ಬಳಿಕವೂ ತೃಪ್ತರಾಗದ ಮಕ್ಕಳು ತಾಯಿಗೆ ಬಂದ ಎಲ್ಲಾ ಜಮೀನನ್ನು ತಮ್ಮೆಲ್ಲರ ಜಂಟಿ ಹೆಸರಿಗೆ ವರ್ಗಾಯಿಸಿಕೊಂಡಿದ್ದರು.
ಈ ಸಂಬಂದ 2018ರಲ್ಲೇ ಮಂಗಳೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಹಿರಿಯ ನಾಗರಿಕರ ನ್ಯಾಯ ಮಂಡಳಿಯು ಪ್ರಕಟಿಸಿದ್ದು, ತೀರ್ಪಿನಲ್ಲಿ, ಎಲ್ಲಾ ಐದು ಮಕ್ಕಳು ತಲಾ 2000 ರೂಪಾಯಿಗಳನ್ನು ಮಾಸಾಶನವಾಗಿ ನೀಡುವಂತೆ ಆದೇಶ ನೀಡಿತ್ತು. ಆದರೆ, ಯಾರೂ ಕೂಡಾ ತಾಯಿಯ ಪೋಷಣೆ ಮಾಡಿಲ್ಲ. ಇದೀಗ ಮೋಂತಿನಮ್ಮನ ಐದು ಮಕ್ಕಳಲ್ಲಿ, ಮೂವರು ನ್ಯಾಯ ಮಂಡಳಿಯ ಅಧ್ಯಕ್ಷ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದು, ತಾಯಿಗೆ ಮಾಸಾಶನ ನೀಡಲು ಅಸಾಧ್ಯ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ.
ಮಕ್ಕಳು ತನಗೆ ಮಾಸಾಶನ ನೀಡಲು ಅಸಾಧ್ಯ ಎಂದ ಬಳಿಕ, ತನ್ನ ಹಕ್ಕಿಗೆ ಬಂದ ಆಸ್ತಿಯನ್ನಾದರು ಮಾರಿ ಜೀವನ ಸಾಗಿಸುತ್ತೇನೆ ಎಂದು ಮೋಂತಿನಮ್ಮ ತೀರ್ಮಾನ ಮಾಡಿದ್ದರು. ಆದರೆ, ತನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಉಳಿದಿಲ್ಲ ಎಂದು ತಿಳಿಯಿತು. ಮಕ್ಕಳು ತನ್ನಿಂದ ಹೇಗೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನುವ ವಿಚಾರ ಕೂಡಾ ವೃದ್ದೆಗೆ ತಿಳಿದಿಲ್ಲ. ಎಲ್ಲಾ ದಾಖಲೆಗಳನ್ನು ಕೂಡಾ ಮಕ್ಕಳೇ ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಐವರು ಮಕ್ಕಳ ಪೈಕಿ ಓರ್ವ ಮಗ (ಬುದ್ದಿಭ್ರಮಣೆ ಆಗಿದ್ದು) ಹಾಗೂ ಮಗಳು ತಾಯಿಗೆ ಸಹಾಯ ಮಾಡುತ್ತಿದ್ದಾರೆ.
"ಮೋಂತಿನಮ್ಮ ಪಾರ್ಟಿಶನ್ ಡೀಡ್ಸ್ ವಾಪಾಸ್ಸು ಪಡೆದುಕೊಂಡರೆ ಆಕೆಯ ಆಸ್ತಿ ಪುನಃ ಸಿಗುತ್ತದೆ. ಆಕೆಗೆ ಸಂಪೂರ್ಣ ನ್ಯಾಯ ದೊರಕುವವರೆಗೆ ಸಹಕಾರ ನೀಡಲು ಪ್ರತಿಷ್ಠಾನ ಬದ್ದವಾಗಿದೆ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆ ಹಾಗೂ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಸಭೆ ಕರೆದಿದ್ದು, ಈ ವೇಳೆ ಮಕ್ಕಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಾಯಿಗೆ ಬಂದ ಜಮೀನನ್ನು ಆರು ತಿಂಗಳೊಳಗೆ ಅವರಿಗೆ ಹಿಂದಿರುಗಿಸಿ, ಅವರ ಹೆಸರಿನಲ್ಲಿ ಹಕ್ಕು ಪತ್ರ ಮಾಡಿಸಲು ಒಪ್ಪಿಕೊಂಡಿದ್ದಾರೆ.