ಕಾಪು, ಮಾ.28 (DaijiworldNews/MB) : ವಾಲಿಬಾಲ್ ಕೋರ್ಟ್ನ ಪಕ್ಕದಲ್ಲೇ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿಯ ಜಿಲ್ಲೆಯ ಇನ್ನಂಜೆಯಲ್ಲಿ ನಡೆದಿದೆ.
ಕುರ್ಕಾಲು ಸುಭಾಸ್ ನಗರ ನಿವಾಸಿ 33 ವರ್ಷ ವಯಸ್ಸಿನ ದೇವು ಯಾನೆ ದೇವರಾಜ್ ಮೃತ ಆಟಗಾರ. ಅವರು ಈ ಹಿಂದೆ ಈ ಹಿಂದೆ ಕಲ್ಲು ಗಣಿಯೊಂದರಲ್ಲಿ ರೈಟರ್ ಆಗಿ ದುಡಿಯುತ್ತಿದ್ದರು.
ಶನಿವಾರ ರಾತ್ರಿ ಇನ್ನಂಜೆಯಲ್ಲಿ ನಡೆಯುತ್ತಿದ್ದ ಇನ್ನಂಜೆ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇನ್ನಂಜೆ ಚಾಲೆಂಜರ್ಸ್ ತಂಡದ ಪರವಾಗಿ ಆಟವಾಡುತ್ತಿದ್ದ ದೇವರಾಜ್ ಅವರು ರಾತ್ರಿ 1 ಗಂಟೆಯ ವೇಳೆಗೆ ಆಟವಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಅವಿವಾಹಿತರಾಗಿದ್ದ ಅವರು ತಾಯಿ ಮತ್ತು ಐದು ಮಂದಿ ಸಹೋದರಿಯರನ್ನು ಅಗಲಿದ್ದಾರೆ.
ರಾಜ್ಯ ಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಅವರು ಆರಂಭದಲ್ಲಿ ಕುರ್ಕಾಲು ಸುಭಾಸ್ ನಗರ ತಂಡದ ಆಟಗಾರನಾಗಿ, ಬಳಿಕ ರಾಜ್ಯ ಮಟ್ಟದ ವಿವಿಧ ತಂಡಗಳಲ್ಲಿ ಆಟಗಾರನಾಗಿ ವಾಲಿಬಾಲ್ ಆಟದಲ್ಲಿ ನಿರತರಾಗಿದ್ದರು.
ಅವರ ಸ್ಮರಣಾರ್ಥವಾಗಿ ಇನ್ನಂಜೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದು, ವಿವಿಧೆಡೆ ಪಂದ್ಯಾವಳಿಯ ನಡುವೆಯೇ ಸಂತಾಪ ಸೂಚಕ ಸಭೆ ನಡೆಸಲಾಯಿತು.