ಮಂಗಳೂರು / ಉಡುಪಿ, ಮಾ.28 (DaijiworldNews/MB) : ಕ್ರಿಶ್ಚಿಯನ್ ಸಮುದಾಯಕ್ಕೆ ಪವಿತ್ರ ವಾರದ ಆರಂಭವನ್ನು ಸೂಚಿಸುವ ತಾಳೆ ಗರಿಯ ಭಾನುವಾರ (ಪಾಮ್ ಸಂಡೆ) ಮಾರ್ಚ್ 28 ರ ಭಾನುವಾರ ಉಭಯ ಜಿಲ್ಲೆಗಳಾದ್ಯಂತ ಚರ್ಚುಗಳಲ್ಲಿ ಭಕ್ತಿಯಿಂದ ಆಚರಿಸಲಾಯಿತು.
ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ನಿರ್ಬಂಧಗಳ ಕಾರಣ, ಚರ್ಚುಗಳಿಗೆ ಹಾಜರಾತಿ ಸೀಮಿತವಾಗಿತ್ತು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಯಿತು. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು.
ಉಡುಪಿ ಪ್ರಾಂತದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕಳತ್ತೂರು ಚರ್ಚಿನಲ್ಲಿ ಆಚರಣೆಯನ್ನು ಮುನ್ನಡೆಸಿದರು. ಉಡುಪಿ ಡಯಾಸಿಸ್ನ ಪಿಆರ್ಒ ಚೇತನ್ ಲೋಬೋ ಹಾಗೂ ಫಾ. ಲಾರೆನ್ಸ್ ಬಿ ಡಿಸೋಜಾ ಸಹ-ಆಚರಣೆಯಲ್ಲಿ ಭಾಗಿಯಾದರು.
ಡಾ. ಜೆರಾಲ್ಡ್ ಐಸಾಕ್ ಲೋಬೊ ತನ್ನ ಸಂದೇಶದಲ್ಲಿ, ಯೇಸು ಮರಣಿಸಿದ ಶಿಲುಬೆ ನಿಷ್ಠಾವಂತರಿಗೆ ಮೋಕ್ಷದ ಸಂಕೇತವಾಗಿದೆ. ನಮ್ಮ ದಾರಿಯಲ್ಲಿ ಬರುವ ಎಲ್ಲಾ ಕಷ್ಟಗಳನ್ನು ನಾವು ಸ್ವೀಕರಿಸಬೇಕು ಎಂದು ಹೇಳಿದರು.
ಪವಿತ್ರ ವಾರವು ಈಸ್ಟರ್ ಭಾನುವಾರದೊಂದಿಗೆ ಮುಕ್ತಾಯಗೊಳ್ಳುತ್ತದೆ, ಇದು ಈ ಬಾರಿ ಏಪ್ರಿಲ್ 4 ರಂದು ಆಚರಿಸಲಾಗುತ್ತದೆ.
ಈ ಸಂದರ್ಭವು ಜೆರುಸಲೆಮ್ಗೆ ಯೇಸುವಿನ ಆಗಮನವನ್ನು ಸೂಚಿಸುತ್ತದೆ. ಅವನ ಆಗಮನದ ಸಮಯದಲ್ಲಿ, ಯೇಸುವಿನ ಶಿಷ್ಯರು ತಾಳೆ ಗರಿಗಳನ್ನು ಬೀಸುವ ಮೂಲಕ ಸ್ವಾಗತ ಮಾಡಿದ್ದರು. ಈ ದಿನದ ನೆನಪಿಗಾಗಿ ಭಕ್ತರು ಈ ದಿನದಂದು ತಾಳೆ ಗರಿಗಳನ್ನು ಹಿಡಿದು ಸ್ತುತಿಗೀತೆಗಳನ್ನು ಹಾಡುವ ಮೂಲಕ ಆಚರಣೆ ಮಾಡುತ್ತಾರೆ. ಈ ವರ್ಷ ಕೊರೊನಾ ಕಾರಣದಿಂದ ಆಚರಣೆಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.
ಕಳೆದ ವರ್ಷ ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಚರ್ಚುಗಳು ಮತ್ತು ಇತರ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗಿತ್ತು ಎಂದು ನೆನಪಿಸಿಕೊಳ್ಳಬಹುದು. ಆ ಸಂದರ್ಭ ಆನ್ಲೈನ್ ಮೂಲಕ ಪವಿತ್ರ ವಾರವನ್ನು ಆಚರಿಸಲಾಗಿತ್ತು.