ಉಡುಪಿ, ಮಾ.27 (DaijiworldNews/HR): ಸೇನಾ ನೇಮಕಾತಿ ರ್ಯಾಲಿ ಮಾರ್ಚ್ 17 ರಿಂದ ಆರಂಭವಾಗಿದ್ದು, ಸುಮಾರು 10 ದಿನಗಳ ನಿರಂತರವಾಗಿ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲನೆಯ ದಿನ 3,000 ಮಂದಿ ಜಿಲ್ಲೆಗೆ ಬರುವ ನಿರೀಕ್ಷೆ ಇತ್ತು ಆದರೂ ಜಿಲ್ಲಾಡಳಿತದ ನಿರೀಕ್ಷೆಗೂ ಮೀರಿದ ಆಕಾಂಕ್ಷಿಗಳು ಸೇನಾ ನೇಮಕಾತಿಯಲ್ಲಿದ್ದು ಅವರಿಗೆ ಸರಿಯಾದ ಊಟ ಮತ್ತು ವಸತಿ ವ್ಯವಸ್ಥೆ ಆಗಿರಲಿಲ್ಲ. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಶಿವಮೊಗ್ಗ, ಉತ್ತರಕನ್ನಡ ಹೀಗೆ ಬೇರೆ ಬೇರೆ ಜಿಲ್ಲೆಯಿಂದ ಚಾಲನೆಯ ಮೊದಲ ದಿನವೇ ಉಡುಪಿಗೆ ಬಂದಿಳಿದಿದ್ದರು.
ಮೊದಲ ದಿನ ಜಿಲ್ಲಾಡಳಿತ ಮತ್ತು ಜಿಲ್ಲಾ ಕ್ರೀಡಾ ಇಲಾಖೆ ದಾನಿಗಳ ಸಹಾಯದಿಂದ ಉಪಚಾರ ಕೊಟ್ಟಿತ್ತು. ಆದರೆ ಆಯೋಜಕರಿಂದ ಸರಿಯಾದ ವಸತಿ ವ್ಯವಸ್ಥೆ ಆಗದ ಕಾರಣ, ದೇಶದ ಸೇನಾ ಅಭ್ಯರ್ಥಿಗಳು ರಾತ್ರಿ ರಸ್ತೆಯಲ್ಲಿ, ಪಾರ್ಕ್ನಲ್ಲಿ, ಬಸ್ ಸ್ಟಾಂಡ್ ಮುಂತಾದ ಕಡೆ ರಾತ್ರಿ ಕಳೆಯುವಂತಾಗಿತ್ತು. ಇದರಿಂದ ಜಿಲ್ಲಾಡಳಿತ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ನಂತರ, ಜಿಲ್ಲಾಡಳಿತ ವ್ಯವಸ್ಥೆಯ ಹೊಣೆ ಹೊತ್ತು ಶ್ರೀ ಕೃಷ್ಣ ಮಠದ ರಾಜಾಂಗಣ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ 1000, ಅಂಬಲಪಾಡಿ ದೇವಾಲಯದಲ್ಲಿ 300, ಜಿ.ಶಂಕರ್ ಕಾಲೇಜಿನಲ್ಲಿ 700, ವಿವೇಕಾನಂದ ಶಾಲೆಯಲ್ಲಿ 200, ಬನ್ನಂಜೆ ಮಹಾಲಿಂಗೇಶ್ವರ ದೇವಾಲಯದಲ್ಲಿ 100 ಮಂದಿಗೆ ವಸತಿ ವ್ಯವಸ್ಥೆ ಮಾಡಲಾಯಿತು.
ಕೆಲವು ಜಿಲ್ಲೆಯಿಂದ ಅಭ್ಯರ್ಥಿಗಳು ವಾಹನ ಮಾಡಿಕೊಂಡು ಇಲ್ಲಿಗೆ ಬರುತ್ತಾರೆ, ಹಾಗಾಗಿ ಅನುತ್ತೀರ್ಣ ಹೊಂದಿದವರು ತಮ್ಮವರು ಬರುವವರೆಗೆ ಕೇಂದ್ರದಲ್ಲಿ ಉಳಿದುಕೊಳ್ಳುತ್ತಿರುವುದು ಎಲ್ಲರಿಗೂ ವಸತಿ ಊಟ ಕಲ್ಪಿಸುವುದು ಕಷ್ಟವಾಗಿತ್ತು. ಮಾರ್ಚ್ 27 ರವರೆಗೂ 37000 ಹೆಚ್ಚು ಅಭ್ಯರ್ಥೀಗಳು ನೇಮಕಾತಿಯಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಜಿಲ್ಲಾಡಳಿತ ತಿಳಿಸಿದೆ.
ಇದನ್ನೆಲ್ಲಾ ಗಮನಿಸಿದ ನಂತರ ಉಡುಪಿಯ ಸಮಾನ ಮನಸ್ಕರು, ಬೇರೆ ಬೇರೆ ಸಂಘ ಸಂಸ್ಥೆಯವರು ಬೆಂಬಲದಿಂದ ಪ್ರತಿದಿನ ಭಾರತೀಯ ಸೇನೆಯ ಆಯ್ಕೆ ಪ್ರಕ್ರಿಯೆಗೆ ಆಗಮಿಸಿದ್ದ ಅಭ್ಯರ್ಥಿಗಳಿಗೆ ರುಚಿಕರ ಬಿಸಿ ಬಿಸಿ ಊಟ ನೀಡುವ ಕಳಕಳಿ ಇಟ್ಟುಕೊಂಡು ಕಾರ್ಯರಂಭಿಸಿತು. ಕೆಲವು ದಿನ ಅನ್ನ ಸಾಂಬಾರ್ ಪಾಯಸ ಕೊಟ್ಟರೆ , ಬೇರೆ ದಿನ ವೆಜ್ ಪಲಾವ್ ಊಟ ಕಡಿಮೆಯಾದಾಗ ತಿಂಡಿಯನ್ನು ಕೊಟ್ಟು ಯಾವೊಬ್ಬ ಯುವಕರು ಹಸಿವೆಯಿಂದ ಮಲಗದಂತೆ ನೋಡಿಕೊಂಡರು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಾದ ಅನ್ಸರ್ ಅಹ್ಮದ್ ಸೇರಿದಂತೆ ಇತರ ಸಮಾನ ಮನಸ್ಕರು ನಿಸ್ವಾರ್ಥ ಸೇವೆ ಆರಂಬಿಸಿದರು.
ಪ್ರತಿದಿನ ಸುಮಾರು 2000 ಅಭ್ಯರ್ಥಿಗಳು ಇಲ್ಲಿಗೆ ಬಂದು ಊಟ ಮಾಡಿ ಹೋಗುತ್ತಾರೆ . ಈಗಾಗಲೇ ಎರೆಡೆರಡು ಕಡೆ ಅಜ್ಜರಕಾಡು ಮೈದಾನದ ಬಳಿ ಮತ್ತು ಹುತಾತ್ಮರ ಸ್ಮಾರಕದ ಬಳಿ ಊಟ ನೀಡಲಾಗುತ್ತಿದೆ.
ಇವರ ಸೇವೆಯನ್ನು ನೋಡಿ ಹೆಚ್ಚಿನವರು ತಾವಾಗಿಯೇ ಬಂದು ಈ ಕೆಲಸಕ್ಕೆ ಸಹಾಯಧನ ನೀಡಿದ್ದಾರೆ. ಇನ್ನು ಕೆಲವು ದಾನಿಗಳು ಒಂದೊಂದು ಬಗೆಯ ಆಹಾರ ಕೊಟ್ಟು ಸಹಕರಿಸಿದ್ದಾರೆ ಎನ್ನಲಾಗಿದೆ.