ಮಂಗಳೂರು, ಮಾ.27 (DaijiworldNews/MB) : ಅಮಾನತುಗೊಂಡಿರುವ ಸಬ್ ಇನ್ಸ್ಪೆಕ್ಟರ್ (ಎಸ್ಐ) ಕಬ್ಬಾಳ್ ರಾಜ್ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಸ್ಐ ಆಗಿದ್ದಾಗ ದುರ್ನಡತೆ, ಅಧಿಕಾರದ ದುರ್ಬಳಕೆ, ಅಕ್ರಮ ಸಂಪಾದನೆ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ದೂರು ನೀಡುವುದಾಗಿ ಆರ್ಟಿಐ ಕಾರ್ಯಕರ್ತ ದಿನೇಶ್ ಗಾಣಿಗ ಅವರು ಶನಿವಾರ ಹೇಳಿದರು.
ಮಾರ್ಚ್ 27 ರ ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
''ಈ ನಿಟ್ಟಿನಲ್ಲಿ ನಾನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಇದಲ್ಲದೆ, ನಾನು ಸಿಐಡಿ ಅಧಿಕಾರಿಗಳಿಗೆ ದೂರು ನೀಡುತ್ತೇನೆ, ಕಬ್ಬಾಳ್ ರಾಜ್ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಸಾರ್ವಜನಿಕರೊಂದಿಗೆ ದುರ್ನಡತೆ, ಅಧಿಕಾರದ ದುರ್ಭಳಕೆ, ಅಕ್ರಮ ಸಂಪಾದನೆ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ'' ಎಂದು ಹೇಳಿದ್ದಾರೆ.
''ವಶಪಡಿಸಿಕೊಂಡ ಐಷಾರಾಮಿ ಕಾರನ್ನು ಮಂಗಳೂರಿನಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ಸಬ್ ಇನ್ಸ್ಪೆಕ್ಟರ್ (ಎಸ್ಐ) ಕಬ್ಬಾಳ್ ರಾಜ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ'' ಎಂದೂ ಕೂಡಾ ದಿನೇಶ್ ಗಾಣಿಗ ಹೇಳಿದರು.
''ಸರಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇತಂಹ ಭ್ರಷ್ಟ ಅಧಿಕಾರಿಗೆ ಕರ್ನಾಟಕ ಸರಕಾರ ಕೊಡಮಾಡಿದ 2020-21 ರ ಸಾಲಿನ ಮುಖ್ಯಮಂತ್ರಿ ಪದಕವನ್ನು ತಕ್ಷಣವೇ ವಾಪಸ್ಸು ಪಡೆಯಬೇಕೆಂದು ನಾನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ'' ಎಂದೂ ಅವರು ತಿಳಿಸಿದರು.