ಕಾಸರಗೋಡು, ಮಾ 27 (DaijiworldNews/MS): ಮತಯಂತ್ರದಲ್ಲಿ ಅಳವಡಿಸುವ ಪಕ್ಷಗಳ ಚಿಹ್ನೆಗಳ ಗಾತ್ರದಲ್ಲಿ ತಾರತಮ್ಯ ಬೆಳಕಿಗೆ ಬಂದ ಘಟನೆ ಕಾಸರಗೋಡಿನಲ್ಲಿ ನಡೆದಿದ್ದು, ಈ ಬಗ್ಗೆ ಯು.ಡಿ.ಎಫ್ ಪ್ರತಿಭಟನೆ ನಡೆಸಿ ದೂರು ನೀಡಿದ ಹಿನ್ನಲೆಯಲ್ಲಿ ಚಿಹ್ನೆ ಅಳವಡಿಕೆ ಹಾಗೂ ತಪಾಸಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದ ಮತಯಂತ್ರದಲ್ಲಿ ಅಳವಡಿಸುವ ಚಿಹ್ನೆಯ ಗಾತ್ರದಲ್ಲಿ ವ್ಯತ್ಯಾಸ ಕಂಡುಬಂದಿದ್ದು ಯು.ಡಿ.ಎಫ್ ನ ಏಣಿ ಚಿಹ್ನೆ ಸಣ್ಣದಾಗಿ ಬಿಜೆಪಿಯ ತಾವರೆ ಚಿಹ್ನೆ ದೊಡ್ಡದಾಗಿ ಮುದ್ರಿಸಲಾಗಿದೆ.ಇದು ಗಮನಕ್ಕೆ ಬರುತ್ತಿದ್ದಂತೆ ಯು.ಡಿ.ಎಫ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎನ್ . ಎ ನೆಲ್ಲಿಕುನ್ನುಯವರು ಜಿಲ್ಲಾ ಚುನಾವಣಾಧಿಕಾರಿಗೆ ದೂರು, ಸಲ್ಲಿಸಿದ್ದು ಇದರಿಂದ ಅಳವಡಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆಯಿಂದ ಅಭ್ಯರ್ಥಿಗಳ ಏಜಂಟರುಗಳ ಸಮ್ಮುಖದಲ್ಲಿ ಮತಯಂತ್ರಗಳ ತಪಾಸಣೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ತಾವರೆ ಚಿಹ್ನೆ ಉಳಿದ ಚಿಹ್ನೆಗಳಿಗಿಂತ ದೊಡ್ಡ ಗಾತ್ರದಲ್ಲಿ ಮುದ್ರಿಸಲಾಗಿರುವುದು ಗಮನಕ್ಕೆ ಬಂದಿದೆ.
ಜಿಲ್ಲಾ ಚುನಾವಣಾಧಿಕಾರಿಯವರು ಯು.ಡಿ.ಎಫ್ ಅಭ್ಯರ್ಥಿ ಸಲ್ಲಿಸಿರುವ ದೂರನ್ನು ರಾಜ್ಯ ಚುನಾವಣಾಧಿಕಾರಿವರಿಗೆ ಹಸ್ತಾ೦ತರಿಸಿದ್ದು , ರಾಜ್ಯ ಚುನಾವಣಾ ಆಯೋಗದ ಮುಂದಿನ ಸೂಚನೆಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದೆ .ಚುನಾವಣಾ ಅಕ್ರಮಕ್ಕೆ ಇದೊಂದು ಉದಾಹರಣೆ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಭ್ಯರ್ಥಿ ಎನ್ . ಎ ನೆಲ್ಲಿಕುನ್ನು ಹಾಗೂ ನ್ಯಾಯವಾದಿ ಎ . ಗೋವಿಂದನ್ ನಾಯರ್ ಒತ್ತಾಯಿಸಿದ್ದಾರೆ