ಉಡುಪಿ, ಮಾ.27 (DaijiworldNews/MB) : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಕ್ಯಾಂಪಸನ್ನು ಸೀಲ್ಡೌನ್ ಮಾಡಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಶುಕ್ರವಾರ ತಿಳಿಸಿದ್ದಾರೆ.
"ಎಂಐಟಿಯಲ್ಲಿ ಈವರೆಗೆ ಕೊರೊನಾ ರೋಗಿಗಳ ಸಂಖ್ಯೆ 770 ಕ್ಕೆ ಏರಿದೆ, ಶುಕ್ರವಾರ 184 ಕೊರೊನಾ ಪಾಸಿಟಿವ್ ವರದಿಯಾಗಿದೆ. ಮಾರ್ಚ್ 17 ರಂದು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದ್ದು ಈ ಕ್ಯಾಂಪಸ್ನ್ನು ನಾವು ಈಗ ಸೀಲ್ಡೌನ್ ಮಾಡಿದ್ದೇವೆ'' ಸುಧಾಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
''ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಕರಾವಳಿ ಜಿಲ್ಲೆಯ ಸಂಸ್ಥೆಗಳಲ್ಲಿ ಸುಮಾರು 6,000 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದ್ದು ಈ ಪೈಕಿ ಅಧಿಕ ಮಂದಿ ಲಕ್ಷಣರಹಿತ ಕೊರೊನಾ ಸೋಂಕಿತರು ಎಂದು ತಿಳಿದು ಬಂದಿದೆ.
ಇನ್ನು "ಕೊರೊನಾ ರೋಗಿಗಳನ್ನು ಪ್ರತ್ಯೇಕಿಸಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಇತರೆ ಚಿಕಿತ್ಸೆ ನಿರ್ಬಂಧಿಸಲಾಗಿದೆ" ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸ್ಫೋಟ ಕಂಡು ಬಂದಿದ್ದು ಶುಕ್ರವಾರ ಒಂದೇ ದಿನ 210 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ಪೈಕಿ 184 ಮಂದಿ ಮಣಿಪಾಲದ ಎಂಐಟಿ ಕ್ಯಾಂಪಸ್ನವರು ಆಗಿದ್ದಾರೆ. ಮಣಿಪಾಲದಲ್ಲಿ ಈವರೆಗೆ 706 ಮಂದಿಗೆ ಕೊರೊನಾ ದೃಢಪಟ್ಟಿದೆ. ಕಂಟೈನ್ಮೆಂಟ್ ಝೋನ್ನಲ್ಲಿರುವ ಎಲ್ಲರ ಸ್ವಾಬ್ ಟೆಸ್ಟ್ ನಡೆಸಲಾಗುತ್ತಿದೆ. ಎಂಐಟಿ ಕ್ಯಾಂಪಸ್ನಲ್ಲಿ ಪಾಸಿಟಿವಿಟಿ ರೇಟ್ ಆಘಾತಕಾರಿಯಾಗಿದ್ದು ಶೇ. 20 ರ ಆಸುಪಾಸು ಇಲ್ಲಿನ ಪಾಸಿಟಿವಿಟಿ ರೇಟ್ ಇದೆ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಂಬಂಧಪಟ್ಟ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ತರುವ ಬಗ್ಗೆ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ನಿರ್ದೇಶಿಸಿದೆ.