ವಿಟ್ಲ, ಮಾ.27 (DaijiworldNews/PY): ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳ ಮಂಗಲ್ಪಾಡಿ ನಿವಾಸಿಗಳಾದ ಅಬ್ದುಲ್ ಲತೀಫ್ (26), ಮೀಯಪದವು ನಿವಾಸಿ ಶಾಕಿರ್ (23), ಅಡ್ಕಂತಗುರಿ ನಿವಾಸಿ ಅಸ್ಪಾಕ್ (25) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಕಾರು, ಪಿಸ್ತೂಲ್, ಮಾದಕ ವಸ್ತುಗಳು, ಕೊಡಲಿ ಹಾಗೂ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾರ್ಚ್ 25ರ ಗುರುವಾರ ಮಧ್ಯಾಹ್ನ ಕೇರಳದ ಉಪ್ಪಳದ ಹಿದಾಯತ್ ನಗರದ ರೆಸ್ಟೋರೆಂಟ್ವೊಂದರಲ್ಲಿ ಇತ್ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ನಂತರ ರೆಸ್ಟೋರೆಂಟ್ ಹಾಗೂ ಸಾರ್ವಜನಿಕರತ್ತ ಗುಂಡಿನ ದಾಳಿ ನಡೆಸಿತ್ತು. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಕಾಸರಗೋಡು ಡಿವೈಎಸ್ಪಿ ಪಿ.ಪಿ. ಸದಾನಂದ್ ಹಾಗೂ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಕಾರಿನಲ್ಲಿ ಬಂದಿದ್ದ ಎರಡು ತಂಡಗಳು ಪರಾರಿಯಾಗಿವೆ.
ಇವರನ್ನು ಹಿಂಬಾಲಿಸಿದ ಪೊಲೀಸರಿಗೆ ಒಂದು ಕಾರು ಮೀಯಪದವು ಕೆಂಪು ಕಲ್ಲಿನ ಕೋರೆ ಸಮೀಪ ಬಿಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಪೊಲೀಸರು ಕಾರನ್ನು ಪರಿಶೀಲನೆ ಮಾಡಿದ್ದು, ಕಾರಿನಲ್ಲಿ ಗುಂಡು ತುಂಬಿಸುವ ಪ್ಯಾಕೆಟ್ ಹಾಗೂ ಇನ್ನು ಇತರೆ ವಸ್ತುಗಳು ಪತ್ತೆಯಾಗಿದೆ. ರಾತ್ರಿ 8.30ರ ಸುಮಾರಿಗೆ ಪೊಲೀಸರು ಆ ಕಾರನ್ನು ಹಗ್ಗಕಟ್ಟಿ ಎಳೆದು ಪೊಲೀಸ್ ಠಾಣೆಗೆ ತರಲು ಮುಂದಾದಾಗ ಇನ್ನೊಂದು ಕಾರಿನಲ್ಲಿ ಬಂದ ಆಗಂತುಕರ ತಂಡ ಪೊಲೀಸರ ಮೇಲೆ ಗುಂಡು ಹಾರಿಸಿದೆ. ಈ ಸಂದರ್ಭ ಎಸ್ಐ ಬಾಲಕೃಷ್ಣನ್ ಅವರ ಕೈಗೆ ಗಾಯವಾಗಿದೆ.
ಗುಂಡು ಹಾರಿಸಿ ಕಾರಿನಲ್ಲಿ ಪರಾರಿಯಾದ ಆಗಂತುಕರನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಇವರು ಕರ್ನಾಟಕ ಗಡಿ ದಾಟುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರಿಗೆ ಮಂಜೇಶ್ವರ ಪೊಲೀಸರ ಮಾಹಿತಿ ನೀಡಿದ್ದರು.
ವಿಟ್ಲ ಠಾಣಾಧಿಕಾರಿ ವಿನೋದ್ ಕುಮಾರ್ ರೆಡ್ಡಿ ಅವರ ನೇತೃತ್ವದ ತಂಡ ಸಾಲೆತ್ತೂರು ಸಮೀಪದ ಕಟ್ಟತ್ತಿಲ ಕೊಡಂಗೆ ಚೆಕ್ಪೋಸ್ಟ್ನಲ್ಲಿ ರಾತ್ರಿಯಿಂದಲೇ ನಾಕಬಂದಿ ಅಳವಡಿಸಿ, ಕಾಯುತ್ತಿದ್ದರು. ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಕಾರು ಆಗಮಿಸಿದ್ದು, ಈ ಸಂದರ್ಭ ಪೊಲೀಸರು ಕಾರು ನಿಲ್ಲಿಸಲು ಹೇಳಿದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಪರಿಣಾಮ ಪೊಲೀಸರಿಗೆ ಸಣ್ಣ-ಪುಟ್ಟ ಗಾಯಗಳಾಗೊದ್ದು, ಅಪಾಯದಿಂದ ಪಾರಾಗಿದ್ದಾರೆ. ಆಗಂತುಕರು ನಡೆಸಿದ ದಾಳಿಗೆ ಪ್ರತಿದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಪಶ್ಚಿಮ ವಲಯ ಐಜಿಪಿ, ದ.ಕ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ, ಪೊಲೀಸರಾದ ರವೀಶ್, ಡ್ಯಾನಿ ಫ್ರಾನ್ಸಿಸ್ ತಾವ್ರೋ, ಪ್ರಸನ್ನ, ಲೋಕೇಶ್, ಪ್ರತಾಪ್, ಹೇಮರಾಜ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.