ಉಡುಪಿ, ಮಾ. 26(DaijiworldNews/HR): ಬ್ರಾಹ್ಮಣ ಯುವತಿಯರ ವಿವಾಹ ಕುರಿತ ಪೇಜಾವರ ಶ್ರೀಗಳ ಹೇಳಿಕೆಗೆ ನನ್ನ ಪೂರ್ಣ ಪ್ರಮಾಣದ ಬೆಂಬಲ ಇದೆ ಎಂದು ಅದಮಾರು ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪೇಜಾವರ ಶ್ರೀಗಳಿಗೆ ನನ್ನ ಪೂರ್ಣ ಪ್ರಮಾಣದ ಬೆಂಬಲ ಇದ್ದು, ಮಕ್ಕಳು ಹಿರಿಯರ ಕಣ್ಗಾವಲಿನಿಂದ ತಪ್ಪುತ್ತಿದ್ದು, ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳು ಕಾಳಜಿಯ ಮಾತನಾಡಿದ್ದಾರೆ" ಎಂದರು.
"ಶಿಕ್ಷಣ ಮೌಲ್ಯ ಕಳೆದುಕೊಳ್ಳುತ್ತಿದ್ದು, ಯುವ ಜನಾಂಗ ದಾರಿ ತಪ್ಪಿ ಹೋಗುತ್ತಿದ್ದು, ಕಡೆಗಾಲದಲ್ಲಿ ತಮಗೆ ಯಾರು ಗತಿ ಇಲ್ಲವೆಂದು ಪೋಷಕರು ಪರದಾಡುತ್ತಿದ್ದು, ಕುಟುಂಬವನ್ನು ನಿರ್ಲಕ್ಷಿಸಿದ ಯುವಕರ ಸ್ಥಿತಿಯೂ ಹದಗೆಡುತ್ತಿದ್ದು, ತಮ್ಮ ಮಕ್ಕಳು ದಾರಿ ತಪ್ಪಬಾರದು ಎಂದು ಹಿರಿಯರು ಹೇಳಿದರೆ ತಪ್ಪಿಲ್ಲ, ತಮ್ಮ ಮಕ್ಕಳು ಹೀಗೆಯೇ ಇರಬೇಕು ಎಂದು ಹಿರಿಯರು ಅಂದುಕೊಂಡರೆ ತಪ್ಪೇನು?" ಎಂದು ಪ್ರಶ್ನಿಸಿದ್ದಾರೆ.
ಇನ್ನು "ನಿರ್ಧಾರ ತೆಗೆದುಕೊಳ್ಳುವಾಗ ಮಕ್ಕಳು ಜಾಗರೂಕರಾಗಿರಬೇಕು, ಸಮಾಜವನ್ನು ತಿದ್ದುವ ಮಾತುಗಳನ್ನು ಶ್ರೀಗಳು ಆಡಿದರೆ ತಪ್ಪಿಲ್ಲ, ಸಮಾಜದ ಬಗೆಗಿನ ಕಾಳಜಿಯಿಂದ ಶ್ರೀಗಳು ಮಾತನಾಡಿದ್ದು, ಪ್ರಸಿದ್ಧಿಗೆ ಬರಬೇಕು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಅದಮಾರು ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.