ಬೈಂದೂರು, ಮಾ 26 (DaijiworldNews/MS): ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ತಗ್ಗರ್ಸೆ ಎಂಬಲ್ಲಿ ಮಾ.26 ರ ಶುಕ್ರವಾರ ನಡೆದಿದೆ. ತಗ್ಗರ್ಸೆ ನಿವಾಸಿ ದಾಸಪ್ಪ (42) ಮೃತ ದುರ್ದೈವಿ.
ಕೊಲ್ಲೂರು ಕಡೆಯಿಂದ ಬರುತ್ತಿದ್ದ ಬೆಂಗಳೂರು ನೊಂದಣಿಯ ಸ್ವಿಫ್ಟ್ ಕಾರು ತಗ್ಗರ್ಸೆಯಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ದಾಸಪ್ಪ ಎಂಬುವವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ತಲೆಯ ಭಾಗಕ್ಕೆ ಗಂಭೀರ ಗಾಯವಾದ ಅವರನ್ನು ಸ್ಥಳಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು.
ಡಿಕ್ಕಿ ಹೊಡೆದ ಕಾರಿನ ಚಾಲಕ ಎಲ್ಲಿಯೂ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ಶಿರೂರು ತೂದಳ್ಳಿ ಮೂಲಕ ಭಟ್ಕಳ ಕಡೆಗೆ ತೆರಳಿದ್ದ ಎನ್ನಲಾಗಿದೆ. ಘಟನೆಯ ಮಾಹಿತಿ ಪಡೆದುಕೊಂಡ ಬೈಂದೂರು ಪೊಲೀಸರು ತಕ್ಷಣ ಕಾರನ್ನು ಹಿಂಬಾಲಿಸಿ ಹೋಗಿದ್ದು ಅಷ್ಟರಲ್ಲೇ ಕಾರನ್ನು ಭಟ್ಕಳದ ಬೇಲಂದೂರು ಎಂಬಲ್ಲಿ ನಿಲ್ಲಿಸಿ, ಚಾಲಕ ಪರಾರಿಯಾಗಿದ್ದ. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸ್ಐ ಸಂಗೀತಾ ಅವರ ತಂಡ ಕಾರ್ಯಾಚರಣೆಯಲ್ಲಿದ್ದು ತಕ್ಷಣ ಕಾರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಗೂಡ್ಸ್ ಕ್ಯಾರಿಯರ್ ರಿಕ್ಷಾ ಚಾಲಕರಾಗಿದ್ದ ದಾಸಪ್ಪ ಅವರ ನಿಧನದಿಂದ ತಗ್ಗರ್ಸೆ ಭಾಗದಲ್ಲಿ ನೀರವ ಮೌನ ಆವರಿಸಿತ್ತು. ಮೃತರು ತಾಯಿ, ಮಡದಿ, ಓರ್ವ ಪುತ್ರಿ, ಸಹೋದರ-ಸಹೋದರಿಯರು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.