ಮಂಗಳೂರು, ಮಾ.26 (DaijiworldNews/PY): ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರು ವಿಧಿಸಿದ ದಂಡವನ್ನು ಹಿಂದಿರುಗಿಸಿ ಉತ್ತಮ ಕಾರ್ಯ ಮಾಡಿದ್ದಾರೆ.
ಸಮವಸ್ತ್ರ ಧರಿಸಿಲ್ಲ ಎನ್ನುವ ಕಾರಣ ನೀಡಿ ಖಾಸಗಿ ಓಮ್ನಿ ವಾಹನ(ವೈಟ್ ಬೋರ್ಡ್)ದಲ್ಲಿ ಚಾಲಕ ದಂಡ ವಿಧಿಸುವಂತಿಲ್ಲ. ಈ ನಿಯಮ ಕೇವಲ ಯಲ್ಲೋ ಬೋರ್ಡ್ ನಂಬರ್ ಪ್ಲೇಟ್ ನ ವಾಹನ ಚಾಲಕರಿಗೆ ಮಾತ್ರ ಅನ್ವಯವಾಗುತ್ತದೆ.
ಮಾರ್ಚ್ 23ರಂದು ರಾಮಲ್ಕಟ್ಟೆ ಎಂಬಲ್ಲಿ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಸಮವಸ್ತ್ರ ಧರಿಸದಿದ್ದ ಪಾಣೆಮಂಗಳೂರು ಮೂಲದ ಕಾರು ಚಾಲಕ ಅನಿಲ್ ಕೋಲ್ಪೆ ಎನ್ನುವವರಿಗೆ 500 ರೂ.ಗಳ ದಂಢ ವಿಧಿಸಿದ್ದರು. ಮಾರ್ಚ್ 25ರಂದು ಪೊಲೀಸ್ ನೀಡಿದ ದಂಡದ ರಶೀದಿಯನ್ನು ನೋಡಿದ ಅನಿಲ್ ಅವರ ಪುತ್ರ ಇದನ್ನು ಎಸ್ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಎಸ್ಪಿ ಅವರು ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದು, ಶೀಘ್ರವೇ ಪ್ರತಿಕ್ರಿಯಿಸಿದ್ದಾರೆ.
ಮಾರ್ಚ್ 25ರಂದು ರಾತ್ರಿ 11.45ರ ಸುಮಾರಿಗೆ ಕಾರು ಚಾಲಕನಿಗೆ 500 ರೂ. ಅನ್ನು ಹಿಂದಿರುಗಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಯವರ ಉತ್ತಮ ಕಾರ್ಯಕ್ಕೆ ಕಾರು ಮಾಲೀಕ ಅನಿಲ್ ಕೋಲ್ಪೆ ಹಾಗೂ ಅವರ ಪುತ್ರ ಧನ್ಯವಾದ ತಿಳಿಸಿದ್ದಾರೆ.