ಉಡುಪಿ, ಮಾ 26 (DaijiworldNews/MS): ನವಜಾತ ಶಿಶುಗಳ ಮರಣ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ತಗ್ಗಿಸಲು ಕೇಂದ್ರ ಸರ್ಕಾರ ಶುರುಮಾಡಿದ ಯೋಜನೆಯೇ "ಪೋಷಣ ಅಭಿಯಾನ". ಪೋಷಣ ಅಭಿಯಾನ ಅಪೌಷ್ಠಿಕತೆಯಿಂದ ಮಕ್ಕಳನ್ನು ಹೊರತರುವ ಕಾರ್ಯಕ್ರಮವಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ತೀವ್ರ ಕಡಿಮೆ ಇದೆ. ಜಿಲ್ಲೆಯಲ್ಲಿ 19 ತೀವ್ರ ಅಪೌಷ್ಠಿಕ, 270 ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ. ಅಂತಹ ಮಕ್ಕಳನ್ನು ಎನ್.ಆರ್.ಸಿ ಕೇಂದ್ರಕ್ಕೆ ಕರೆ ತರುವ ಮೂಲಕ ಅಪೌಷ್ಠಿಕತೆಯ ಹಣೆಪಟ್ಟಿಯನ್ನು ತಗೆದು ಹಾಕಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದರು.
ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಆರೋಗ್ಯ ಅಧಿಕಾರಿ ಕಛೇರಿ, ಕುಂದಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತೋಟಗಾರಿಕಾ ಇಲಾಖೆ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕುಂದಾಪುರ ವತಿಯಿಂದ ಪೋಷಣ ಪಾಕ್ಷಿಕ ಕಾರ್ಯಕ್ರಮದ ಅಂಗವಾಗ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನ ಕೋಯಕುಟ್ಟ ಹಾಲ್ನಲ್ಲಿ ನಡೆದ ಕುಂದಾಪುರ, ಬೈಂದೂರು ತಾಲೂಕು ಎನ್.ಆರ್.ಸಿ ಫಲಾನುಭವಿಗಳ ಸಭೆ ‘ಪೌಷ್ಠಿಕ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂದೆ ತಾಯಿಗೆ ಕಷ್ಟವಾದರೂ ಸರಿ ಮಕ್ಕಳ ಆರೋಗ್ಯದ ವಿಚಾರದಲ್ಲಿ ಲಕ್ಷ್ಯವಹಿಸಬೇಕು. ಇಲ್ಲದಿದ್ದರೆ ಮಕ್ಕಳು ಮತ್ತು ಸಮಾಜ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ ಅವರು, ನೈಸರ್ಗಿಕವಾಗಿ ದೊರೆಯುವ ಪೌಷ್ಠಿಕಾಂಶ ಉಳ್ಳ ಆಹಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ನವೀನ್ ಭಟ್, ಮಕ್ಕಳ ಬೆಳವಣಿಗೆಯಲ್ಲಿ ಮೊದಲ ಸಾವಿರ ದಿನಗಳು ಬಹಳ ಮುಖ್ಯವಾಗಿವೆ. ಈ ಸಮಯದಲ್ಲಿ ಸಮಸ್ಯೆಗಳಲ್ಲಿ ಅಪೌಷ್ಠಿಕತೆ ಸಮಸ್ಯೆಗಳಿದ್ದರೆ ಸರಿ ಪಡಿಸಿಕೊಳ್ಳಲು ಸಾಧ್ಯವಿದೆ. ಅಪೌಷ್ಠಿಕ ಮಗುವಿದ್ದರೆ ಆ ಮಗುವನ್ನು ಆರೋಗ್ಯವಂತ ಮಗುವನ್ನಾಗಿ ರೂಪಿಸುವಲ್ಲಿ ತಂದೆ ಹಾಗೂ ತಾಯಿ ಸಮಾನ ಜವಾಬ್ದಾರರು ಎಂದರು.
ಉಪವಿಭಾಗಾಧಿಕಾರಿ ಕೆ.ರಾಜು, ತಾ.ಪಂ.ಅಧ್ಯಕ್ಷೆ ಹೆಚ್.ಇಂದಿರಾ ಶೆಟ್ಟಿ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಚೈರ್ಮೆನ್ ಜಯಕರ ಶೆಟ್ಟಿ, ಭಂಡಾರ್ಕಾರ್ಸ್ ಕಾಲೇಜು ಪ್ರಾಂಶುಪಾಲರಾದ ಡಾ|ಎನ್.ಪಿ ನಾರಾಯಣ ಶೆಟ್ಟಿ, ತಹಶೀಲ್ದಾರ್ ಆನಂದಪ್ಪ ನಾಯಕ್, ತೋಟಗಾರಿಕಾ ಇಲಾಖೆಯ ಅಧಿಕಾರಿ ಸಂಜೀವ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಸುಮ ಪ್ರಾರ್ಥಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ|ನಾಗಭೂಷಣ ಉಡುಪ ಸ್ವಾಗತಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ವೇತಾ ವಂದಿಸಿದರು. ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ|ಲತಾ ಕಾರ್ಯಕ್ರಮ ನಿರ್ವಹಿಸಿದರು.
ಸಹನ ಸಿಲ್ಕ್ ಹೌಸ್ ಕುಂದಾಪುರ, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಕೆ. ಆರ್.ನಾಯ್ಕ, ಹೋಟೆಲ್ ಪಾರಿಜಾತ ಕುಂದಾಪುರ ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಿದ್ದರು. ಡಾ|ಸುದರ್ಶನ ಉಡುಪ, ಡಾ|ಮಹಿಮಾ, ಡಾ| ಪ್ರಮೀಳಾ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೌಷ್ಠಿಕಾಂಶಯುಕ್ತ ಹಿತ್ತಲ ಗಿಡಗಳು, ವಿವಿಧ ಸೊಪ್ಪು, ತರಕಾರಿಗಳ ಪ್ರದರ್ಶನ, ಸಿದ್ಧ ಪೌಷ್ಠಿಕಾಂಶಗಳ ಮಹತ್ವ, ವಿವಿಧ ಮಾಹಿತಿ ಕರಪತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು. ಭಾಗವಹಿಸಿದ ಪೋಷಕರಿಗೆ ಅದೃಷ್ಟ ಚಿನ್ನದ ನಾಣ್ಯದ ಬಹುಮಾನ, ಎಲ್ಲರಿಗೂ ಉಚಿತ ಸೀರೆ ವಿತರಿಸಲಾಯಿತು.