ಕುಂದಾಪುರ, ಮಾ.25 (DaijiworldNews/PY): "ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಮೂರು ಶಿಕ್ಷಣ ಸಂಸ್ಥೆಗಳಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಸೋಂಕು ಹೊರಗಡೆ ಪ್ರಸಾರ ಹೋಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ" ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಕುಂದಾಪುರದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, "ಶಿಕ್ಷಣ ಸಂಸ್ಥೆಗಳಲ್ಲಿ ಕೊರೊನಾದ ಬಗ್ಗೆ ಜಾಗೃತಿ ವಹಿಸುವಂತೆ ಡಿಡಿಪಿಐ., ಡಿಡಿಪಿಯು ಅವರಿಗೆ ತಿಳಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆ ಕಂಡುಬಂದರೆ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
"ಆಫ್ಲೈನ್ ಕ್ಲಾಸ್ಗಿಂತ ಆನ್ಲೈನ್ ಕ್ಲಾಸ್ಗೆ ಒತ್ತು ನೀಡುವುದು ಅಗತ್ಯವಾಗಿದೆ. ಆದರೆ ಈಗ ಪರೀಕ್ಷೆಗಳು ನಡೆಯುತ್ತಿರುವುದರಿಂದ ಜಾಗೃತಿ ವಹಿಸಬೇಕಾಗಿತ್ತದೆ. ಈಗಾಗಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಸ್ಕ್ ಧಾರಣೆ ಕಡ್ಡಾಯ, ವ್ಯಕ್ತಿಗತ ಅಂತರ ಕಾಪಾಡುವುದು , ಕೊರೊನಾ ನಿಯಮ ಉಲ್ಲಂಘನೆ ಮಾಡಿದರೆ ಹೆಚ್ಚಿನ ದಂಡ ವಿಧಿಸುವ ಬಗ್ಗೆ ಅಭಿಯಾನ ಮಾಡಿದ್ದೇವೆ. ಮತ್ತೆ ಈ ಹಿಂದೆ ಇದ್ದ ಕೊರೊನಾ ನಿಯಮಾವಳಿಗಳನ್ನು ಪುನರಾವರ್ತಿಸಿದ್ದೇವೆ. ಲಾಕ್ ಡೌನ್ ಸನ್ನಿವೇಶ ಇಲ್ಲ, ಮದುವೆ ಇತ್ಯಾದಿ ಶುಭ ಸಮಾರಂಭಗಳಿಗೆ ನಿಗದಿತ ಜನರಿಗಿಂತ ಹೆಚ್ಚು ಜನ ಸೇರುವುದು, ಕೊರೊನಾ ನಿಯಮ ಉಲ್ಲಂಘನೆ ಕಂಡುಬಂದರೆ ಅಧಿಕಾರಿಗಳ ಮೇಲೆಯೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು" ಎಂದರು.
"ದೇವಸ್ಥಾನಗಳಲ್ಲಿ ಕಡ್ಡಾಯ ಕೊರೊನಾ ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಕೊಲ್ಲೂರು ಜಾತ್ರೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗುತ್ತದೆ. ಭಕ್ತಾದಿಗಳಿಗೆ ಭಾಗವಹಿಸಲು ಅವಕಾಶವಿಲ್ಲ" ಎಂದರು.
"ಜಿಲ್ಲೆಯಲ್ಲಿ ದಿನಕ್ಕೆ 400 ಪ್ರಕರಣ ಕಂಡುಬಂದರೂ ಎದುರಿಸಲು ಆಡಳಿತ ಸನ್ನದ್ದವಾಗಿದೆ. ಲಸಿಕೆ ನೀಡುವಿಕೆಯಲ್ಲಿಯೂ ಕೂಡಾ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ" ಎಂದರು.