ಕುಂದಾಪುರ, ಮಾ 25 (DaijiworldNews/MS): ಕೋವಿಡ್ ಎರಡನೇ ಅಲೆಯು ಪ್ರಾರಂಭವಾಗುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಸಹ ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮಗಳಾದ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರಪಾಲನೆ ಮಾಡದೇ ಇರುವುದು ಕಂಡು ಬರುತ್ತಿದ್ದು, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಸ್ವತಃ ಕುಂದಾಪುರದಲ್ಲಿ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ಜಾಗೃತಿ ಮೂಡಿಸಿದರು.
ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುವರನ್ನು ಎಚ್ಚರಿಸಿ, ದಂಡ ಕಟ್ಟುವಂತೆ ಸೂಚಿಸಿದರು. ಮಾಸ್ಕ್ ಧರಿಸಿದೆ ಸಂಚರಿಸುವ ನಾಗರಿಕರು, ರಿಕ್ಷಾ, ಇತ್ಯಾದಿ ವಾಹನ ಸವಾರರನ್ನು ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳಿಗೆ ಎಚ್ಚರಿಕೆ:
ಕುಂದಾಪುರದ ರಸ್ತೆಯುದ್ದಕ್ಕೂ ವಿದ್ಯಾರ್ಥಿಗಳ ಸಮೂಹವನ್ನು ನಿಲ್ಲಿಸಿಕೊಂಡು ಕೊರೊನಾ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮನ ಮುಟ್ಟುವಂತೆ ವಿವರಿಸಿದರು. ಬಿಸಿಲ ಝಳದ ನಡುವೆಯೂ ವಿದ್ಯಾರ್ಥಿಗಳನ್ನು ಕೆಲಹೊತ್ತು ನಿಲ್ಲಿಸಿಕೊಂಡು ಅರಿವು ಮೂಡಿಸಿದರು. ಶೋರೂಂ, ಹೋಟೆಲ್, ಬೇಕರಿಗಳಿಗೆ ಭೇಟಿ ನೀಡಿದರು. ಮಾಸ್ಕ್ ಧರಿಸಿದ ಬೀದಿ ವ್ಯಾಪಾರಿಗಳನ್ನು ಎಚ್ಚರಿಸಿದರು.
ರಿಕ್ಷಾದವರ ಸಂಕಷ್ಟ ಆಲಿಕೆ
ನಂದಿನಿ ಹೋಟೆಲ್ ಹತ್ತಿರ ರಿಕ್ಷಾ ನಿಲ್ದಾಣದಲ್ಲಿ ಅಟೋರಿಕ್ಷಾದವರಿಗೆ ಕೊರೋನಾ ಜಾಗೃತಿ, ಕಡ್ಡಾಯ ಮಾಸ್ಕ್ ಧಾರಣೆಯ ಬಗ್ಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಕೆಲಹೊತ್ತು ರಿಕ್ಷಾದವರ ಸಂಕಷ್ಟ ಆಲಿಸಿದರು. ಅಟೋ ರಿಕ್ಷ ಚಾಲಕರು ಇವತ್ತಿ ಇಂಧನ ಬೆಲೆ ಏರಿಕೆ ನಡುವೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಬೆಳಿಗ್ಗೆಯಿಂದ ರಾತ್ರಿಯ ತನಕ ದುಡಿದರೂ 350-400 ರೂ ಗಳನ್ನಷ್ಟೇ ಉಳಿಸಬಹುದಾಗಿದೆ ಎಂದರು.
ಪಾರಿಜಾತದಲ್ಲಿ ಚಹಾ ಸೇವಿಸಿದ ಡಿಸಿ
ಪಾರಿಜಾತ ಹೋಟೆಲ್ನಲ್ಲಿ ಕೊರೋನಾ ಮುಂಜಾಗ್ರತಾ ಕ್ರಮ ಗಮನಿಸಿ ಮೆಚ್ಚುಗೆ ವ್ಯಕ್ತ ಪಡಿಸಿ ಅಲ್ಲಿಯೇ ತನ್ನೊಂದಿಗಿದ್ದ ಎಲ್ಲ ಅಧಿಕಾರಿಗಳು, ಮಾಧ್ಯಮದವರೊಂದಿಗೆ ಚಹಾ ಸೇವಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಕೆ.ರಾಜು, ತಹಶೀಲ್ದಾರ್ ಆನಂದಪ್ಪ ನಾಯಕ್, ಎಸ್.ಐ ಸದಾಶಿವ ಗವರೋಜಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಂಡಿದ್ದರು.